ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು, ತಮ್ಮ ಸಂಪುಟದ ನೂತನ ಸಚಿವರಿಗೆ ಸೋಮವಾರ ಖಾತೆ ಹಂಚಿಕೆ ಮಾಡಿದ್ದಾರೆ. ಗೃಹ ಮತ್ತು ಹಣಕಾಸು ಖಾತೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.
ರಾಜ್ಯ ಸಚಿವರಿಂದ ಕ್ಯಾಬಿನೆಟ್ ದರ್ಜೆಗೆ ಬಡ್ತಿ ಪಡೆದ ಮೂವರು ಸೇರಿ ಒಟ್ಟು 15 ಮಂದಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದರು.
ಹಿಂದಿನ ಕ್ಯಾಬಿನೆಟ್ನಲ್ಲಿದ್ದ ಪ್ರತಾಪ್ ಸಿಂಗ್ ಕಚಾರಿಯವಾಸ್ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು, ಶಾಂತಿ ಧರಿವಾಲ್ ಅವರು ಸಂಸದೀಯ ವ್ಯವಹಾರಗಳ ಖಾತೆ, ಲಾಲ್ಚಂದ್ ಕಠಾರಿಯಾ ಕೃಷಿ ಮತ್ತು ಪ್ರಮೋದ್ ಜೈನ್ ಅವರು ಪೆಟ್ರೋಲಿಯಂ ಮತ್ತು ಗಣಿ ಖಾತೆಯನ್ನು ಉಳಿಸಿಕೊಂಡಿದ್ದಾರೆ.
ಬಿ.ಡಿ. ಕಲ್ಲಾ ಮತ್ತು ಪ್ರಸಾದಿ ಲಾಲ್ ಮೀನಾ ಅವರಿಗೆ ಕ್ರಮವಾಗಿ ಶಿಕ್ಷಣ ಮತ್ತು ಆರೋಗ್ಯ ಖಾತೆಗಳನ್ನು ನೀಡಲಾಗಿದೆ.
ನೂತನ ಸಚಿವರಾದ ಹೇಮರಾಮ್ ಚೌಧರಿ(ಅರಣ್ಯ), ಮಹೇಶ್ ಜೋಷಿ(ಪಿಎಚ್ಇಡಿ), ರಾಮಲಾಲ್ ಜಟ್(ಕಂದಾಯ), ರಮೇಶ್ ಮೀನಾ(ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ), ವಿಶ್ವೇಂದ್ರ ಸಿಂಗ್(ಪ್ರವಾಸ ಮತ್ತು ನಾಗರಿಕ ವಿಮಾನಯಾನ), ಗೋವಿಂದ್ರಂ ಮೇಘವಾಲ್(ವಿಪತ್ತು ನಿರ್ವಹಣೆ ಮತ್ತು ಪರಿಹಾರ), ಶಕುಂತಲಾ ರಾವತ್(ಕೈಗಾರಿಕೆ) ಅವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.
ಸಿಂಗ್ ಮತ್ತು ಮೀನಾ ಅವರನ್ನು ಕಳೆದ ವರ್ಷ ಸಂಪುಟದಿಂದ ಕೈಬಿಡಲಾಗಿತ್ತು. ಸಿಂಗ್ ಅವರಿಗೆ ಮತ್ತೆ ತಮ್ಮ ಹಳೆಯ ಖಾತೆ ಪ್ರವಾಸೋದ್ಯಮ ಸಿಕ್ಕಿದೆ.
ಮಮತಾ ಭೂಪೇಶ್ ಅವರಿಗೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ನೀಡಲಾಗಿದೆ. ಭಜನ್ ಲಾಲ್ಗೆ ಲೋಕೋಪಯೋಗಿ, ಟೀಕಾರಮ್ ಜುಲ್ಲಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ನೀಡಿ ಕ್ಯಾಬಿನೆಟ್ ದರ್ಜೆಗೆ ಬಡ್ತಿ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.