ADVERTISEMENT

ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ವಿಶ್ವಾಸ ವ್ಯಕ್ತಪಡಿಸಿದ ಅಶೋಕ್ ಗೆಹ್ಲೋಟ್

ಏಜೆನ್ಸೀಸ್
Published 9 ಆಗಸ್ಟ್ 2020, 17:55 IST
Last Updated 9 ಆಗಸ್ಟ್ 2020, 17:55 IST
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್   

ಜೈಪುರ: ಇದೇ ತಿಂಗಳ 14 ರಂದು ಆರಂಭವಾಗುವ ವಿಧಾನಸಭೆ ಅಧಿವೇಶನದಲ್ಲಿಬಹುಮತ ಸಾಬೀತುಪಡಿಸುವ ವಿಶ್ವಾಸವನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವ್ಯಕ್ತಪಡಿಸಿದ್ದಾರೆ.

ನಮ್ಮ ಹೋರಾಟವು ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟವಾಗಿದೆ. ಇದು ಅಧಿವೇಶನ ಪ್ರಾರಂಭವಾದ ಆಗಸ್ಟ್ 14ರ ನಂತರವೂ ಮುಂದುವರಿಯುತ್ತದೆ. ನಾವು ಗೆಲ್ಲುತ್ತೇವೆ ಮತ್ತು ಸರ್ಕಾರವು ಉರುಳುವುದನ್ನು ಇಚ್ಛಿಸದ ಶಾಸಕರು ಅಧಿಕಾರದಲ್ಲಿರಲಿ ಅಥವಾ ಪ್ರತಿಪಕ್ಷದಲ್ಲಾಗಲಿ, ಎಲ್ಲ ಶಾಸಕರು ಸಹ ಗೆಲ್ಲುತ್ತಾರೆ. ಶಾಸಕರು ಅವರ ಆತ್ಮಸಾಕ್ಷಿಯನ್ನು ಕೇಳುವಂತೆ ನಾನು ಪತ್ರ ಬರೆದಿದ್ದೇನೆ. ಜನರು ನಮ್ಮೊಂದಿಗೆ ಇರುವುದರಿಂದ ನಾವು ಗೆಲ್ಲುತ್ತೇವೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ನ ರೆಬೆಲ್ ಶಾಸಕರ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ಮತ್ತು ನಮ್ಮ ಪಕ್ಷವನ್ನು ತೊರೆದವರ ವಿರುದ್ಧ ಪ್ರತಿ ಮನೆಯಲ್ಲೂ ಕೋಪ ವ್ಯಕ್ತವಾಗುತ್ತಿದೆ. ಅವರು ಇದನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರಲ್ಲಿ ಹೆಚ್ಚಿನವರು ನಮ್ಮ ಪಕ್ಷಕ್ಕೆ ಹಿಂತಿರುಗುತ್ತಾರೆ ಎಂದು ನಾನು ನಂಬುತ್ತೇನೆ. ಹರಿಯಾಣದ ಹೋಟೆಲ್‌ಗಳಲ್ಲಿ ಉಳಿದುಕೊಂಡಿರುವ ಶಾಸಕರಿಗೆ ಯಾರನ್ನೂ ಭೇಟಿಯಾಗಲು ಅವಕಾಶವಿಲ್ಲ ಮತ್ತು ನೂರಾರು ಬೌನ್ಸರ್‌ಗಳ ಕಣ್ಗಾವಲಿನಲ್ಲಿಡಲಾಗಿದೆ. ರಾಜಸ್ಥಾನ್ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ತನಿಖೆಗೆ ಹೋದಾಗ, ಅದನ್ನು ದೇಶದ್ರೋಹವೆಂದು ಪರಿಗಣಿಸಲಾಯಿತು. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

ADVERTISEMENT

ಬಿಜೆಪಿಯು ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ಜನರಿಗೆ ನಾವು ನೀಡಿದ್ದ ಭರವಸೆಗಳನ್ನು ಈಡೇರಿಸುವತ್ತ ನಾವು ಬ್ಯುಸಿಯಾಗಿದ್ದರೆ, ಇತ್ತ ಬಿಜೆಪಿ ಸರ್ಕಾರವನ್ನು ಕೆಡವುವಲ್ಲಿ ಕಾರ್ಯನಿರತವಾಯಿತು. ಕುದುರೆ ವ್ಯಾಪಾರದ ಮೂಲಕವೇ ಅವರು ಏಳರಿಂದ ಎಂಟು ರಾಜ್ಯಗಳಲ್ಲಿ ಈಗಾಗಲೇ ಸರ್ಕಾರವನ್ನು ಬೀಳಿಸಿದ್ದಾರೆ. ಕೋವಿಡ್-19 ಹೋರಾಟದಲ್ಲಿ ಜೀವಗಳನ್ನು ಉಳಿಸಲು ನಾವು ಪ್ರಯತ್ನಿಸುತ್ತಿದ್ದೆವು. ಆದರೆ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಗೆಹ್ಲೋಟ್ ಮತ್ತು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದ ಬಳಿಕ ಕಾಂಗ್ರೆಸ್ ತನ್ನ ಶಾಸಕರನ್ನು ಜೈಪುರದ ಫೇರ್‌ ಮಾಂಟ್ ಹೋಟೆಲ್‌ನಲ್ಲಿ ಉಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.