ADVERTISEMENT

ಸೂಪರ್‌ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಅಭಿಮಾನಿಗಳ ಒತ್ತಾಯ

ಏಜೆನ್ಸೀಸ್
Published 10 ಜನವರಿ 2021, 9:55 IST
Last Updated 10 ಜನವರಿ 2021, 9:55 IST
   

ಚೆನ್ನೈ: ಅನಾರೋಗ್ಯದ ಹಿನ್ನೆಲೆಯಲ್ಲಿ ಹೊಸ ರಾಜಕೀಯ ಪಕ್ಷ ಕಟ್ಟುವ ಯೋಜನೆಯಿಂದ ತಮಿಳುನಾಡು ಸೂಪರ್‌ಸ್ಟಾರ್ ನಟ ರಜನಿಕಾಂತ್ ಹಿಂದೆ ಸರಿದಿದ್ದರು. ಇದರಿಂದ ತೀವ್ರ ನಿರಾಸೆಗೊಂಡಿರುವ ಅಭಿಮಾನಿಗಳು, ರಜನಿಕಾಂತ್ ತಮ್ಮ ನಿರ್ಧಾರವನ್ನು ಬದಲಾಯಿಸಿ ರಾಜಕೀಯಕ್ಕೆ ಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ.

ರಜನಿಕಾಂತ್ ಅಭಿಮಾನಿಗಳ ಬಳಗದ ನೇತೃತ್ವದಲ್ಲಿ ಭಾನುವಾರ ಚೆನ್ನೈನ ವಲ್ಲುವರ್ ಕೊಟ್ಟಂನಲ್ಲಿ ಪ್ರದರ್ಶನ ನಡೆಸಿದ ಅಭಿಮಾನಿಗಳು, ರಜನಿಕಾಂತ್ ತಮ್ಮ ನಿರ್ಧಾರವನ್ನು ಬಲಾಯಿಸಿ ರಾಜಕೀಯ ಪ್ರವೇಶಿಸುವಂತೆ ಒತ್ತಾಯಿಸಿದರು.

ಚೆನ್ನೈ ಪೊಲೀಸ್ ಅನುಮತಿಯೊಂದಿಗೆ ಅಭಿಮಾನಿಗಳು ಭಾನುವಾರದಂದು ಪ್ರದರ್ಶನವನ್ನು ನಡೆಸಿದ್ದಾರೆ. ಕೋವಿಡ್-19 ಮಾನದಂಡಗಳನ್ನು ಉಲ್ಲಂಘಿಸಿ ನೂರಾರು ಸಂಖ್ಯೆಯಲ್ಲಿ ಒಗ್ಗೂಡಿದ ಅಭಿಮಾನಿಗಳು, ರಜನಿ ಪರ ಘೋಷಣೆಯನ್ನು ಕೂಗಿದರು.

ADVERTISEMENT

ಬಿಗುಪಟ್ಟು ಹಿಡಿದಿರುವ ಅಭಿಮಾನಿಗಳು ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷಾಂತ್ಯದಲ್ಲಿ ಡಿಸೆಂಬರ್ 31ರಂದು ಹೊಸ ರಾಜಕೀಯ ಪಕ್ಷದ ಘೋಷಣೆ ಮಾಡಿದ್ದ ರಜನಿಕಾಂತ್, 2021 ಜನವರಿಯಲ್ಲಿ ಹೊಸ ರಾಜಕೀಯ ಪಕ್ಷಕ್ಕೆ ಚಾಲನೆ ನೀಡುವುದಾಗಿ ಪ್ರಕಟಿಸಿದ್ದರು. ಆದರೆ ಬಳಿಕ ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು.

ಹೈದರಾಬಾದ್‌ನಲ್ಲಿ ಚಿತ್ರೀಕರಣಕ್ಕಾಗಿ ತೆರಳಿದ್ದ ರಜನಿಕಾಂತ್, ತೀವ್ರ ರಕ್ತದೊತ್ತಡ ಸಮಸ್ಯೆಯ ಹಿನ್ನೆಲೆಯಲ್ಲಿ ಡಿಸೆಂಬರ್ 25ರಂದು ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಿಂದ ಬಿಡುಗಡೆ ಬಳಿಕ ದಿಢೀರ್ ನಿರ್ಧಾರವನ್ನು ಬದಲಾಯಿಸಿ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದರು. ಅಲ್ಲದೆ ಇದು ದೇವರು ನೀಡಿದ ಎಚ್ಚರಿಕೆಯಾಗಿದೆ ಎಂದು ಉಲ್ಲೇಖಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.