ನವದೆಹಲಿ: ಆಗಿನ ಪ್ರಧಾನಿ ರಾಜೀವ್ ಗಾಂಧಿಯವರನ್ನು ಕತ್ತಲಲ್ಲಿಟ್ಟು, ಬಾಬರಿ ಮಸೀದಿಯ ಪ್ರವೇಶ ದ್ವಾರ ತೆರೆಯುವ ಯತ್ನ ನಡೆದಿತ್ತು. ಹಿಂದೂಗಳನ್ನು ಸಮಾಧಾನಪಡಿಸಲು ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ,ಪ್ರಧಾನಿಗೆಈಬಗ್ಗೆಮಾಹಿತಿನೀಡಿರಲಿಲ್ಲಎಂದುಮಾಜಿಐಎಎಸ್ಅಧಿಕಾರಿಯೊಬ್ಬರುಹೇಳಿದ್ದಾರೆ.
ದ್ವಾರ ತೆರೆಯುವ ನಿರ್ಧಾರವನ್ನು ರಾಜೀವ್ ಗಾಂಧಿಗೆ ತಿಳಿಯದಂತೆ ನೋಡಿಕೊಳ್ಳುವ ಉಸ್ತುವಾರಿಯನ್ನು ಅರುಣ್ ನೆಹರು ಮತ್ತು ಎಂ.ಎಲ್ ಫೋತೆದಾರ್ ವಹಿಸಿಕೊಂಡಿದ್ದರು. ಶಾ ಬಾನು ತೀರ್ಪಿನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅಂದಿನ ಪ್ರಧಾನ ಮಂತ್ರಿಗೆ ಎಂ.ಜೆ. ಅಕ್ಬರ್ ಮನವೊಲಿಸಿದ್ದರು ಎಂದು ನಿವೃತ್ತ ಮುಖ್ಯ ಮಾಹಿತಿ ಆಯುಕ್ತ ವಜಾಹತ್ ಹಬೀಬುಲ್ಲಾ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ಹಬೀಬುಲ್ಲಾ ಪ್ರಧಾನಮಂತ್ರಿಯ ವಿಶೇಷಾಧಿಕಾರಿಯಾಗಿದ್ದರು. ಶಾ ಬಾನು ತೀರ್ಪಿನ ನಂತರದ ಘಟನೆಗಳು ಇತರ ಸಮುದಾಯಗಳಲ್ಲಿ ಅನುಮಾನಗಳನ್ನು ಹುಟ್ಟುಹಾಕಿದ್ದವು. ಹಿಂದೂಗಳನ್ನು ಸಮಾಧಾನ ಪಡಿಸಲು ಬಾಬರಿ ಮಸೀದಿಯ ದ್ವಾರಗಳನ್ನು ರಾಮನ ಭಕ್ತರಿಗಾಗಿ ತೆರೆಯುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿತು ಎಂದು ಅವರು ಇತ್ತೀಚೆಗೆ ಬಿಡುಗಡೆಯಾಗಿರುವ ‘ಮೈ ಇಯರ್ಸ್ ವಿತ್ ರಾಜೀವ್’ ಪುಸ್ತಕದಲ್ಲಿ ಹೇಳಿದ್ದಾರೆ.
ಅದಾಗಲೇ ಈ ಸಂಬಂಧ ಆದೇಶ ಅಂಗೀಕಾರವಾಗಿ, ಕಾರ್ಯಗತಗೊಂಡಿತ್ತು. ಆದರೆ, ನಾನು ತಿಳಿಸುವವರೆಗೂ ರಾಜೀವ್ ಅವರಿಗೆ ಈ ಕುರಿತು ಮಾಹಿತಿಯೇ ಇರಲಿಲ್ಲ. ವಿಷಯ ತಿಳಿದಾಗ, ‘ಧಾರ್ಮಿಕ ಸ್ಥಳಗಳ ಕಾರ್ಯವೈಖರಿಯನ್ನು ನಿರ್ಧರಿಸುವಂತಹ ವಿಷಯಗಳಲ್ಲಿ ಯಾವುದೇ ಸರ್ಕಾರಕ್ಕೂ ಮಧ್ಯಪ್ರವೇಶಿಸುವ ಅಧಿಕಾರವಿಲ್ಲ’ ಎಂದು ಅವರು ಹೇಳಿದ್ದರು.
‘ಆದರೆ, ಸರ್, ನೀವು ಪ್ರಧಾನ ಮಂತ್ರಿ’ ಎಂದು ಹೇಳಿದಾಗ, ‘ಖಂಡಿತ. ಆದರೆ, ‘ಈ ಪ್ರಕ್ರಿಯೆಯ ಕುರಿತು ನನಗೆ ತಿಳಿಸಿಲ್ಲ’ ಎಂದು ರಾಜೀವ್ ಅವರು ಪ್ರತಿಕ್ರಿಯಿಸಿದ್ದರು. ಈ ನಡೆಗೆ ಅರುಣ್ (ನೆಹರು), ಫೋತೆದಾರ್ (ಮಖಾನ್ ಲಾಲ್) ಅವರೇ ಕಾರಣ ಎಂಬ ಸಂಶಯವಿದೆ. ಪರಿಶೀಲನೆ ನಡೆಸುತ್ತಿದ್ದೇನೆ. ಅದು ನಿಜವಾಗಿದ್ದರೆ, ಕ್ರಮ ತೆಗೆದುಕೊಳ್ಳುವೆ’ ಎಂದಿದ್ದರು. ಕೆಲವೇ ದಿನಗಳಲ್ಲಿ ರಾಜೀವ್ ಅವರ ಸೋದರ ಸಂಬಂಧಿಯಾಗಿದ್ದ ನೆಹರೂ ಅವರನ್ನು ಸಂಪುಟದಿಂದ ಕೈಬಿಡಲಾಯಿತು ಎಂದೂ ಹಬೀಬುಲ್ಲಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.