ನವದೆಹಲಿ:ಲೋಕಸಭಾ ಚುನಾವಣೆಗೆ ಬಿಜೆಪಿಯ ‘ಸಂಕಲ್ಪ ಪತ್ರ’(ಪ್ರಣಾಳಿಕೆ) ಸಮಿತಿ ಮತ್ತು ಪ್ರಚಾರ ವಿಭಾಗಕ್ಕೆ ಪಕ್ಷದ ಹಿರಿಯ ನಾಯಕರಾದ ರಾಜನಾಥ ಸಿಂಗ್ ಮತ್ತು ಅರುಣ್ ಜೇಟ್ಲಿ ಅವರಿಗೆ ನೇತೃತ್ವ ವಹಿಸಲಾಗಿದ್ದು, 20 ಸದಸ್ಯರನ್ನೊಳಗೊಂಡ ಸಮಿತಿಯನ್ನು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ರಚಿಸಿದ್ದಾರೆ.
ಚುನಾವಣೆ ತಯಾರಿಗಾಗಿ ಅಮಿತ್ ಶಾ 17 ಗುಂಪುಗಳನ್ನು ರಚಿಸಿದ್ದು, ಸಮಿತಿ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದ್ದಾರೆ.
ಕೇಂದ್ರ ಸಚಿವರಾದ ನಿರ್ಮಾಲಾ ಸೀತಾರಾಮನ್, ರವಿ ಶಂಕರ್ ಪ್ರಸಾದ್, ಪಿಯೂಷ್ ಗೋಯಲ್ ಮತ್ತು ಮುಖ್ತಾರ್ ಅಬ್ಬಾಸ್ ನಖ್ವಿ ಹಾಗೂ ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಿವಸಮಿತಿಯಲ್ಲಿದ್ದಾರೆ ಎಂದು ತಿಳಿಸಿದೆ. ಅರುಣ್ ಜೇಟ್ಲಿ ಅವರೂ ಸಹ ಈ ಸಮಿತಿ ಸದಸ್ಯರಾಗಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ಸಾಮಾಜಿಕ ಮತ್ತು ಸ್ವಯಂಸೇವಕ ಕಾರ್ಯಕರ್ತರನ್ನು ತಲುಪುವ ಸಮಿತಿಗೆ ನೇಮಕವಾಗಿದ್ದಾರೆ. ಸಂಪುಟ ಸಹೋದ್ಯೋಗಿಸುಷ್ಮಾ ಸ್ವರಾಜ್ ಅವರಿಗೆ ಚುನಾವಣೆಗೆ ಸಂಬಂಧಿಸಿದ ಸಾಹಿತ್ಯ, ಟಿಪ್ಪಣಿ ರಚನೆ ಸಮಿತಿಯ ಹೊಣೆ ನೀಡಲಾಗಿದೆ.
ರವಿ ಶಂಕರ್ ಪ್ರಸಾದ್ ಅವರು, ಮಾಧ್ಯಮ ಸಮಿತಿ ನೇತೃತ್ವ ವಹಿಸಲಿದ್ದಾರೆ. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಬುದ್ಧಿಜೀವಿಗಳ ಸಭೆಗಳನ್ನು ಏರ್ಪಡಿಸುವ ತಂಡವನ್ನು ಮುನ್ನಡೆಸಲಿದ್ದಾರೆ.
ಲೋಕಸಭಾ ಚುನಾವಣೆ ಏಪ್ರಿಲ್ ಅಥವಾ ಮೇನಲ್ಲಿ ನಡೆಯಲಿದ್ದು, ಬಿಜೆಪಿ ಪ್ರಧಾನಿ ಮುಂದಾಳತ್ವದಲ್ಲಿ ಮತ್ತೆ ಅಧಿಕಾರ ಹಿಡಿಯಲು ಮುಂದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.