ಪಿತೋರ್ಗಢ: ಭಾರತವು ಸದಾ ನೆರೆಯ ದೇಶಗಳೊಂದಿಗೆ ಉತ್ತಮ ಬಾಂಧವ್ಯವನ್ನು ಬಯಸುತ್ತದೆ. ಆದರೆ, ಯಾವುದೇ ದೇಶವು ನಮ್ಮ ಒಂದಿಂಚು ನೆಲವನ್ನು ಅತಿಕ್ರಮಿಸಲು ಮುಂದಾದರೂ ತಕ್ಕ ತಿರುಗೇಟು ನೀಡಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಚುನಾವಣೆ ಸಮೀಪಿಸುತ್ತಿರುವ ಉತ್ತರಾಖಂಡಕ್ಕೆ ಭೇಟಿ ನೀಡಿದ ಅವರು, ಪಿತೋರ್ಗಢದ ಮೂನಾಕೋಟ್ನಲ್ಲಿ ಬಿಜೆಪಿಯ ‘ಶಾಹೀದ್ ಸಮ್ಮಾನ್ ಯಾತ್ರಾ’ದ ಎರಡನೇ ಹಂತಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ‘ನಾವು ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಬಯಸುತ್ತೇವೆ. ಈವರೆಗೆ ಬೇರೆ ದೇಶಗಳ ಜಾಗವನ್ನು ಅತಿಕ್ರಮಿಸಿಲ್ಲ. ನೆರೆ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದುವುದು ಭಾರತದ ಸಂಸ್ಕೃತಿ. ಆದರೆ ಕೆಲವರಿಗೆ ಅದು ಅರ್ಥವಾಗುವುದಿಲ್ಲ. ಅದು ಅವರ ಅಭ್ಯಾಸವೋ ಅಥವಾ ಸ್ವಭಾವವೋ ನನಗೆ ತಿಳಿದಿಲ್ಲ’ ಎಂದು ಹೇಳಿದ್ದಾರೆ.
ಭಯೋತ್ಪಾದನಾ ಚಟುವಟಿಕೆಗಳ ಮೂಲಕ ಸದಾ ಭಾರತವನ್ನು ಅಸ್ಥಿರಗೊಳಿಸಲು ಪಾಕಿಸ್ತಾನವು ಯತ್ನಿಸುತ್ತಿದೆ. ಆ ದೇಶಕ್ಕೆ ಈಗಾಗಲೇ ಕಠಿಣ ಸಂದೇಶ ರವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪಶ್ಚಿಮದ ಗಡಿಯಲ್ಲಿ ಮಿತಿ ಮೀರಿ ವರ್ತಿಸಿದ ನೆರೆ ರಾಷ್ಟ್ರಕ್ಕೆ ನಾವು ಸ್ಪಷ್ಟ ಸಂದೇಶ ನೀಡಿದ್ದೇವೆ. ತಿರುಗೇಟು ನೀಡುವುದು ಮಾತ್ರವಲ್ಲ, ಅಗತ್ಯವಾದಲ್ಲಿ ಸರ್ಜಿಕಲ್ ಮತ್ತು ವೈಮಾನಿಕ ದಾಳಿ ನಡೆಸಲೂ ಸಿದ್ಧರಿದ್ದೇವೆ ಎಂಬುದನ್ನು ತೋರಿಸಿಕೊಟ್ಟಿದ್ದೇವೆ. ಈ ವಿಷಯಗಳನ್ನು ಅರ್ಥ ಮಾಡಿಕೊಳ್ಳದ ಮತ್ತೊಂದು ನೆರೆ ರಾಷ್ಟ್ರವೂ ಇದೆ ಎಂದು ಚೀನಾದ ಹೆಸರು ಉಲ್ಲೇಖಿಸದೇ ರಾಜನಾಥ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.