ಕಾರವಾರ: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಇಲ್ಲಿನ 'ಸೀಬರ್ಡ್' ನೌಕಾನೆಲೆಗೆ (ಕದಂಬ ನೌಕಾನೆಲೆ) ಗುರುವಾರ ಭೇಟಿ ನೀಡಿದರು. ಇಲ್ಲಿ 'ಪ್ರಾಜೆಕ್ಟ್ ಸೀಬರ್ಡ್ 2 ಎ' ಯೋಜನೆಯಡಿ ಪ್ರಗತಿಯಲ್ಲಿರುವ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಗೋವಾದಿಂದ ಹೆಲಿಕ್ಯಾಪ್ಟರ್ನಲ್ಲಿ ಬಂದ ಅವರು, ಕದಂಬ ಹೆಲಿಪ್ಯಾಡ್ನಲ್ಲಿ ಇಳಿಯುವ ಮೊದಲು ನೌಕಾನೆಲೆಯ ವೈಮಾನಿಕ ಸಮೀಕ್ಷೆ ನಡೆಸಿದರು. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಜೊತೆಗಿದ್ದರು.
ಅವರನ್ನು ನೌಕಾಪಡೆಯ ಪಶ್ಚಿಮ ವಲಯದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ವೈಸ್ ಅಡ್ಮಿರಲ್ ಆರ್.ಹರಿಕುಮಾರ್, ಕರ್ನಾಟಕ ನೌಕಾಪ್ರದೇಶದ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಬರಮಾಡಿಕೊಂಡರು.
ನೌಕಾನೆಲೆಯ ವಿವಿಧೆಡೆ ಭೇಟಿ ನೀಡಿದ ರಾಜನಾಥ ಸಿಂಗ್, ನೌಕೆಯನ್ನು ಮೇಲೆತ್ತುವ ಟವರ್ ಸೇರಿದಂತೆ ವಿವಿಧ ಸೌಕರ್ಯಗಳ ಬಗ್ಗೆ ನೌಕಾದಳದ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಲ್ಲದೇ ನೌಕೆಗಳು, ಸಿಬ್ಬಂದಿ ಕಾರ್ಯ ಸನ್ನದ್ಧ ಸ್ಥಿತಿಯಲ್ಲಿರುವುದನ್ನು ಪರಿಶೀಲಿಸಿದರು. ಇದೇವೇಳೆ, ನಾವಿಕರಿಗೆ ನೂತನವಾಗಿ ನಿರ್ಮಿಸಲಾದ ವಸತಿ ಸಮುಚ್ಚಯದಲ್ಲಿ ಅಳವಡಿಸಲಾಗಿರುವ ನೀರಿನ ಸಮರ್ಪಕ ಬಳಕೆ, ಗೃಹ ತ್ಯಾಜ್ಯದ ವಿಲೇವಾರಿ ವ್ಯವಸ್ಥೆ, ಕಡಿಮೆ ವಿದ್ಯುತ್ ಬಳಕೆಯಂಥ ಪರಿಸರ ಸ್ನೇಹಿ ವ್ಯವಸ್ಥೆಗಳನ್ನು ವೀಕ್ಷಿಸಿದರು.
ಬಳಿಕ ಸೀಬರ್ಡ್ ಯೋಜನೆಯ ಗುತ್ತಿಗೆದಾರರು, ಎಂಜಿನಿಯರ್ಗಳು, ಅಧಿಕಾರಿಗಳು, ನಾವಿಕರು ಮತ್ತು ಸಿವಿಲ್ ಕಾರ್ಮಿಕರ ಜೊತೆ ಸಂವಾದ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.