ADVERTISEMENT

ನನ್ನ ವಿರುದ್ಧ ಬಿಹಾರದಲ್ಲಿ ಪ್ರಕರಣ ದಾಖಲಾಗಲು ನಿತೀಶ್‌ ಕಾರಣ : ರಿಯಾ ಚಕ್ರವರ್ತಿ

ಸುಪ್ರೀಂ ಕೋರ್ಟ್‌ಗೆ ನಟಿ ರಿಯಾ ಚಕ್ರವರ್ತಿ ಅಫಿಡಾವಿಟ್‌

ಪಿಟಿಐ
Published 11 ಆಗಸ್ಟ್ 2020, 4:29 IST
Last Updated 11 ಆಗಸ್ಟ್ 2020, 4:29 IST
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸೋಮವಾರ ಮತ್ತೆ ಇ.ಡಿ. ವಿಚಾರಣೆಗೆ ಒಳಪಟ್ಟ ಬಳಿಕ ಹೊರಬಂದ ನಟಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶೌವಿಕ್‌   –ಪಿಟಿಐ ಚಿತ್ರ 
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸೋಮವಾರ ಮತ್ತೆ ಇ.ಡಿ. ವಿಚಾರಣೆಗೆ ಒಳಪಟ್ಟ ಬಳಿಕ ಹೊರಬಂದ ನಟಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶೌವಿಕ್‌   –ಪಿಟಿಐ ಚಿತ್ರ    

ನವದೆಹಲಿ: ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣದಲ್ಲಿ ‘ರಾಜಕೀಯ ಷಡ್ಯಂತ್ರ’ಕ್ಕೆ ತನ್ನನ್ನು ಬಲಿಪಶುವನ್ನಾಗಿಸಬಾರದು ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿರುವ ನಟಿ ರಿಯಾ ಚಕ್ರವರ್ತಿ, ತನ್ನ ವಿರುದ್ಧ ಪಟ್ನಾದಲ್ಲಿ ಎಫ್‌ಐಆರ್‌ ದಾಖಲಾಗಲು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಕಾರಣ ಎಂದು ಆರೋಪಿಸಿದ್ದಾರೆ.

‘ಬಿಹಾರದಲ್ಲಿ ಇನ್ನೇನು ಚುನಾವಣೆ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಸುಶಾಂತ್‌ ಸಾವಿನ ಘಟನೆ ನಡೆದಿದೆ. ಹೀಗಾಗಿ ಆತ್ಮಹತ್ಯೆಗೆ ಮಾಧ್ಯಮಗಳಲ್ಲಿ ಬೇರೆ ಬೇರೆ ಬಣ್ಣಹಚ್ಚಲಾಗುತ್ತಿದೆ. ಮಾಧ್ಯಮಗಳು ಈಗಾಗಲೇ ನನ್ನನ್ನು ಅಪರಾಧಿ ಎಂದು ಘೋಷಿಸಿವೆ’ ಎಂದಿದ್ದಾರೆ.

ಸಿಬಿಐ ತನಿಖೆಗೆ ಅಡ್ಡಿ ಇಲ್ಲ: ‘ಬಿಹಾರ ಪೊಲೀಸರು ತನಿಖೆಯನ್ನು ಸಿಬಿಐಗೆ ವರ್ಗಾವಣೆಗೊಳಿಸಿರುವುದು ಕಾನೂನುಬಾಹಿರ. ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಸಿಬಿಐಗೆ ಒಪ್ಪಿಸಿದರೆ ನನ್ನ ಆಕ್ಷೇಪಣೆ ಇಲ್ಲ. ಬಿಹಾರ ಹಾಗೂ ಕೇಂದ್ರದಲ್ಲಿ ಆಡಳಿತದಲ್ಲಿ ಇರುವ ಪಕ್ಷ ಒಂದೇ ಆಗಿದ್ದು, ಮಹಾರಾಷ್ಟ್ರದಲ್ಲಿ ಈ ಪಕ್ಷ ಬಹುಮತದಲ್ಲಿ ಇಲ್ಲ. ಸಿಬಿಐ ತನಿಖೆ ನಡೆಸಿದರೂ ತನಿಖಾ ವ್ಯಾಪ್ತಿ ಮುಂಬೈ ನ್ಯಾಯಾಲಯದಲ್ಲೇ ಇರಲಿದೆ ಹೊರತು ಪಟ್ನಾದಲ್ಲಿ ಇರುವುದಿಲ್ಲ’ ಎಂದು ಮತ್ತೊಂದು ಅಫಿಡಾವಿಟ್‌ನಲ್ಲಿ ರಿಯಾ ಉಲ್ಲೇಖಿಸಿದ್ದಾರೆ.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಅನ್ನು ಪಟ್ನಾದಿಂದ ಮುಂಬೈಗೆ ವರ್ಗಾಯಿಸುವಂತೆ ಕೋರಿ ರಿಯಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿಗೆ ಮೂರು ದಿನಗಳಲ್ಲಿ ಪ್ರತಿಕ್ರಿಯೆ ನೀಡಬೇಕು ಎಂದು ಪೀಠವು ಮಹಾರಾಷ್ಟ್ರ, ಬಿಹಾರ ಸರ್ಕಾರಗಳಿಗೆ ಮತ್ತು ಸುಶಾಂತ್‌ ಸಿಂಗ್‌ ಅವರ ತಂದೆ ಕೃಷ್ಣ ಕಿಶೋರ್‌ ಸಿಂಗ್‌ ಅವರಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತ್ತು. ಮಂಗಳವಾರ(ಆ.11) ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮತ್ತೆ ಕೈಗೆತ್ತಿಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.