ನವದೆಹಲಿ: ಮುಂಗಾರು ಅಧಿವೇಶನದ ಉಳಿದ ಕಲಾಪಗಳಿಗೆ ಎಂಟು ಸಂಸದರನ್ನು ಅಮಾನತುಗೊಳಿಸಿದ ನಂತರ ಉಂಟಾದ ಗದ್ದಲದಿಂದಾಗಿ ರಾಜ್ಯಸಭಾಕಲಾಪವನ್ನು ಒಂದು ದಿನ ಮುಂದೂಡಲಾಯಿತು.
ಸೋಮವಾರ ಬೆಳಿಗ್ಗೆ ಸದನ ಕಲಾಪ ಆರಂಭವಾಗುತ್ತಿದ್ದಂತೆ, ಕೃಷಿ ಮಸೂದೆಗಳ ಮಂಡನೆವೇಳೆ ಅನುಚಿತ ವರ್ತನೆ ತೋರಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಟಿಎಂಸಿ ನಾಯಕ ಡೇರಕ್ ಒಬ್ರಿಯೆನ್ ಮತ್ತು ಆಪ್ ಸಂಸದ ಸಂಜಯ್ ಸಿಂಗ್ ಸೇರಿದಂತೆ ಎಂಟು ಮಂದಿಯನ್ನು ಮುಂಗಾರು ಅಧಿವೇಶನದ ಉಳಿದ ಕಲಾಪಗಳಲ್ಲಿ ಭಾಗವಹಿಸದಂತೆ ಸಭಾಧ್ಯಕ್ಷ ಪೀಠದಲ್ಲಿದ್ದ ಉಪಸಭಾಪತಿ ಹರಿವಂಶಸಿಂಗ್ ಅಮಾನತುಗೊಳಿಸಿದರು.
ಇದನ್ನು ವಿರೋಧಿಸಿ ವಿರೋಧಪಕ್ಷಗಳು ತೀವ್ರಗದ್ದಲ ಎಬ್ಬಿಸಿದ್ದರು. ಕೋಲಾಹಲದ ನಡುವೆ ಕಾರ್ಯಕಲಾಪಗಳನ್ನು ನಡೆಸಲಾಗದ ಕಾರಣ ಮೂವತ್ತು ನಿಮಷಗಳ ಕಾಲ ಸದನ ಕಲಾಪವನ್ನು ಉಪಸಭಾಪತಿ ಮುಂದೂಡಿದರು. ಸದನ ಪುನಃ ಆರಂಭವಾದಾಗ ವಿರೋಧ ಪಕ್ಷದ ಸದಸ್ಯರು ಗದ್ದಲವನ್ನು ಮುಂದುವರಿಸಿದ್ದರು. ಹೀಗಾಗಿ ಒಟ್ಟು ಐದು ಬಾರಿ ಕಲಾಪವನ್ನು ಮುಂದೂಡಲಾಯಿತು.
ಮಧ್ಯಾಹ್ನ 12 ಗಂಟೆಗೆ ಸದನ ಪುನಃ ಆರಂಭವಾಯಿತು. ಸಭಾಧ್ಯಕ್ಷರ ಪೀಠದಲ್ಲಿ ಕುಳಿತಿದ್ದ ಸಂಸದರಾದ ಭುವನೇಶ್ವರ ಖಲಿತಾ, ಅಮಾನತುಗೊಂಡಿರುವ ಸದಸ್ಯರನ್ನು ಸದನದಿಂದ ಹೊರ ನಡೆಯುವಂತೆ ಸೂಚಿಸಿ, ಸದನದಲ್ಲಿ ಕೋರಂ ಇರುವಂತೆ ನೋಡಿಕೊಳ್ಳಲು ಉಳಿದ ಸದಸ್ಯರಿಗೆ ತಿಳಿಸಿದರು. ಸದನವನ್ನು ಒಂದು ದಿನ ಮುಂದೂಡುವುದಕ್ಕೂ ವಿರೋಧಪಕ್ಷದ ಸದಸದ್ಯರು ಆಕ್ಷೇಪ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.