ADVERTISEMENT

ಅಯೋಧ್ಯೆ ರಾಮ ಮಂದಿರ | ಕಬೀರ್, ನಾನಕ್‌, ಗಾಂಧಿ ರಾಮನ ಮಂತ್ರ

ಆನಂದ ಮಿಶ್ರಾ
Published 5 ಆಗಸ್ಟ್ 2020, 21:24 IST
Last Updated 5 ಆಗಸ್ಟ್ 2020, 21:24 IST
ಭೂಮಿಪೂಜೆ ಸಮಾರಂಭದಲ್ಲಿ ಮಾತನಾಡಿದ ಮೋದಿ–ಪಿಟಿಐ ಚಿತ್ರ
ಭೂಮಿಪೂಜೆ ಸಮಾರಂಭದಲ್ಲಿ ಮಾತನಾಡಿದ ಮೋದಿ–ಪಿಟಿಐ ಚಿತ್ರ   

ಅಯೋಧ್ಯೆಯಲ್ಲಿ ಬುಧವಾರ ನಡೆದ ರಾಮಮಂದಿರ ಭೂಮಿಪೂಜೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಾಲ್ಮೀಕಿ ರಾಮಾಯಣದ ಜತೆಗೆ ಮಹಾತ್ಮ ಗಾಂಧಿ, ಸಂತ ಕಬೀರ್‌ದಾಸ ಮತ್ತು ಗುರು ನಾನಕ್‌ ಅವರ ಕಲ್ಪನೆಯ ನಿರ್ಗುಣ ರಾಮನ ಬಗ್ಗೆಯೂ ಪ್ರಸ್ತಾಪಿಸಿದರು. ಆ ಮೂಲಕ ಬಿಜೆಪಿಯ ಖಟ್ಟರ್‌ ಹಿಂದುತ್ವವಾದಿ ರಾಜಕೀಯ ನಿಲುವುಗಳಿಗೆ ಮೃದುಧೋರಣೆ ಲೇಪಿಸಿದರು.

ಅಷ್ಟೇ ಅಲ್ಲ, ಬೆಳಗಿನ ಪ್ರಾರ್ಥನೆಯ ವೇಳೆ ಪ್ರಧಾನಿ, ಗಾಂಧೀಜಿಯವರ ಅಚ್ಚುಮೆಚ್ಚಿನ ‘ಈಶ್ವರ್ ಅಲ್ಲಾ ತೇರೊ ನಾಮ್’ ಪ್ರಾರ್ಥನೆ ಮಾಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಅವರುರಾಮನನ್ನು ‘ಭಾರತದ ಏಕತೆಯ ಸಂಕೇತ’ ಎಂದು ಬಣ್ಣಿಸಿದರು. ಇದರೊಂದಿಗೆ ಸಮಾಜದ ಎಲ್ಲ ವರ್ಗದವರನ್ನು ತಲುಪುವ ಪ್ರಯತ್ನ ಮಾಡಿದರು. ಭಿನ್ನಾಭಿಪ್ರಾಯ, ವೈಮನಸ್ಸು ಮರೆತು ಮನದಲ್ಲಿ ರಾಮ ಮತ್ತು ಅಯೋಧ್ಯೆಯನ್ನು ಪ್ರತಿಷ್ಠಾಪಿಸಿಕೊಳ್ಳಬೇಕು ಎಂಬ ಸಂದೇಶವನ್ನೂ ಸಾರಿದರು.

ADVERTISEMENT

ದಶಕಗಳ ಕನಸು ಈಡೇರಿದ ಖುಷಿಯಲ್ಲಿದ್ದ ಸಂಘ ಪರಿವಾರದ ನಾಯಕರು, ರಾಮ ಮಂದಿರ ನಿರ್ಮಾಣವನ್ನು ದೇಶದ ಹೆಮ್ಮೆಯ ವಿಷಯ ಎಂದು ಬಿಂಬಿಸುತ್ತಿದ್ದರು.

ದಶಕಗಳಿಂದ ಕಗ್ಗಂಟಾಗಿದ್ದ ರಾಮ ಜನ್ಮಭೂಮಿ ವಿವಾದಕ್ಕೆ ಶಾಂತಿಯುತ ಪರಿಹಾರ ಕಂಡುಹಿಡಿದ ಖುಷಿಯಲ್ಲಿರುವ ಮೋದಿ ಅವರು ವಿಕಾಸದ ಜತೆಗೆ ಏಕತೆ, ಸಾಮರಸ್ಯದ ಮಂತ್ರವನ್ನೂ ಪಠಿಸಿದ್ದಾರೆ.

‘ರಾಮಮಂದಿರದ ಈ ಶಿಲೆಗಳನ್ನು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹೋದರತೆಯಿಂದ ಬೆಸೆಯೋಣ. ಎಲ್ಲರ ಭಾವನೆಗಳಿಗೂ ಗೌರವಿಸುವ ಉದಾತ್ತ ಗುಣಗಳನ್ನು ಬೆಳೆಸಿಕೊಳ್ಳೋಣ. ಸರ್ವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜದ ಎಲ್ಲ ವರ್ಗದವರನ್ನೂ ಪ್ರಗತಿಯ ಪಥದತ್ತ ಕರೆದೊಯ್ಯಬೇಕಿದೆ. ಪ್ರಭು ಶ್ರೀರಾಮ ಯಾವಾಗಲೂ ಬದಲಾವಣೆ ಮತ್ತು ಆಧುನಿಕತೆಯ ಪರವಾಗಿ ಇರುತ್ತಾನೆ’ ಎಂದು ಪ್ರಧಾನಿಯು ಹೇಳಿದ್ದಾರೆ.

‘ಸಾಮಾಜಿಕ ಸಾಮರಸ್ಯವೇ ಶ್ರೀರಾಮನ ಆಡಳಿತದ ಉಸಿರಾಗಿತ್ತು. ಸಮಾಜದ ಕೆಳಸ್ತರದವರ ಬಗ್ಗೆ ರಾಮನಿಗೆ ಅಪಾರ ಗೌರವ, ಕಾಳಜಿ ಇತ್ತು. ಶಬರಿಯಿಂದ ತಾಯಿಯ ಪ್ರೀತಿ, ಅಂಬಿಗನಿಂದ ವಿಶ್ವಾಸ ಮತ್ತು ಬುಡಕಟ್ಟು ಜನಾಂಗದ ಸಹಕಾರ ಪಡೆದು ಆಡಳಿತ ನಡೆಸಿದ’ ಎಂದು ರಾಮಾಯಣದ ಸಂದರ್ಭಗಳನ್ನು ವಿವರಿಸಿದರು.

11ನೇ ಶತಮಾನದಲ್ಲಿ ಮಹಮ್ಮದ್‌ ಘಜನಿಯ ಸಹೋದರ ಸಂಬಂಧಿ ಘಾಜಿ ಸಲಾರ್‌ ಮಸೂದ್‌ನನ್ನು ಸೋಲಿಸಿದ ರಾಜಾಸುಹೇಲ್‌ದೇವ್‌ ಅವರ ಸಾಹಸ, ಶೌರ್ಯಗಳನ್ನು ಕೊಂಡಾಡುವುದನ್ನು ಅವರು ಮರೆಯಲಿಲ್ಲ.ಸುಹೇಲ್‌ದೇವ್ ಅವರು ದಲಿತ ಸಮೂಹದ ಗೌರವ, ಪ್ರತಿಷ್ಠೆಯ ಸಂಕೇತ. ಉತ್ತರ ಪ್ರದೇಶದ ರಾಜಕಾರಣಿ ಓಂಪ್ರಕಾಶ್‌ ರಾಜಭರ್ ಅವರು ಸುಹೇಲ್‌ದೇವ್‌ ಅವರ ಹೆಸರಿನಲ್ಲಿ ‘ಸುಹೇಲ್‌ದೇವ್‌ ಭಾರತೀಯ ಸಮಾಜ ಪಕ್ಷ’ ಕಟ್ಟಿದ್ದಾರೆ.

‌ಬ್ರಾಹ್ಮಣ ಮತ್ತು ಬನಿಯಾಗಳ ಪಕ್ಷ ಎಂಬ ಆರೋಪದಿಂದ ಪಕ್ಷವನ್ನು ಹೊರತರಲು ಬಿಜೆಪಿ ನಾಯಕರು ಪದೇ ಪದೇ ಪ್ರಯತ್ನ ಮಾಡುತ್ತಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಅವರು, ದಲಿತರು, ಹಿಂದುಳಿದ ವರ್ಗದವರತ್ತ ಮೃದು ಧೋರಣೆ ವ್ಯಕ್ತಪಡಿಸುತ್ತಾರೆ.

‘ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ದೇಶದ ದಲಿತರು, ಹಿಂದುಳಿದವರು, ಬುಡಕಟ್ಟು ಜನರು ಮತ್ತು ಸಮಾಜದ ಎಲ್ಲ ವರ್ಗದವರು ಮಹಾತ್ಮ ಗಾಂಧಿ ಅವರಿಗೆ ಬೆಂಬಲವಾಗಿ ನಿಂತಿದ್ದರು. ಅದೇ ರೀತಿ ಎಲ್ಲ ವರ್ಗಗಳ ಬೆಂಬಲದಿಂದಾಗಿ ಇಂದು ರಾಮಮಂದಿರ ನಿರ್ಮಾಣ ಆರಂಭವಾಗಿದೆ’ ಎಂದು ಮೋದಿ ಹೇಳಿದ್ದಾರೆ.

ಚುನಾವಣಾ ಪ್ರಚಾರ ರ‍್ಯಾಲಿಗಳಲ್ಲಿ ‘ಜೈಶ್ರೀರಾಮ್’‌ ಘೋಷಣೆಯೊಂದಿಗೆ ಭಾಷಣ ಆರಂಭಿಸುತ್ತಿದ್ದ ಮೋದಿ ಅವರು ಇಂದು ತಮ್ಮ ವರಸೆ ಬದಲಿಸಿದರು. ‘ಜೈ ಶ್ರೀರಾಮ್‌’ ಬದಲಿಗೆ ಉತ್ತರ ಭಾರತದಲ್ಲಿ ಮನೆಮಾತಾಗಿರುವ ‘ಸಿಯಾರಾಮ್‌ ಮತ್ತು ಸಿಯಾವರ್‌ ರಾಮ್‌’ ಎಂಬ ಘೋಷಣೆ ಮೊಳಗಿಸಿದರು. ಇದರೊಂದಿಗೆ ಮಹಿಳೆಯರ ಬಗ್ಗೆ ಇರುವ ಗೌರವವನ್ನು ಎತ್ತಿ ಹಿಡಿದರು.

ಅಡ್ವಾಣಿ: ಮೋದಿಗೆ ಮರೆವು, ಭಾಗವತ್‌ಗೆ ನೆನಪು

ರಾಮ ಮಂದಿರ ಚಳವಳಿಯ ಮುಖ್ಯ ಶಿಲ್ಪಿಗಳಲ್ಲಿ ಒಬ್ಬರಾದ ಎಲ್‌.ಕೆ. ಅಡ್ವಾಣಿ ಅವರ ಹೆಸರು ಮೋದಿ ಅವರ ಭಾಷಣದಲ್ಲಿ ಉಲ್ಲೇಖವಾಗಲಿಲ್ಲ. ಆದರೆ, ಮೋಹನ್‌ ಭಾಗವತ್‌ ಅವರು ಅಡ್ವಾಣಿ ಹೆಸರನ್ನು ಪ್ರಸ್ತಾಪಿಸಿದರು. ‘ಅಡ್ವಾಣಿ ಅವರು ತಮ್ಮ ಮನೆಯಲ್ಲಿ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸುತ್ತಿರುತ್ತಾರೆ’ ಎಂದು ಭಾಗವತ್‌ ಭಾಷಣದಲ್ಲಿ ಹೇಳಿದರು.

ಮಂದಿರ–ಮಸೀದಿ ದೇಶದ ಸಂಕೇತವಲ್ಲ: ಒವೈಸಿ

ಮಂದಿರ ಅಥವಾ ಮಸೀದಿಯು ಈ ದೇಶದ ಸಂಕೇತವಾಗಲು ಸಾಧ್ಯವಿಲ್ಲ. ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಪ್ರಧಾನಿಯವರು ತಮ್ಮ ಅಧಿಕಾರದ ಪ್ರಮಾಣವಚನ ಮತ್ತು ಸಂವಿಧಾನದ ಜಾತ್ಯತೀತ ಮೌಲ್ಯಗಳನ್ನು ಉಲ್ಲಂಘಿಸಿದ್ದಾರೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಒವೈಸಿ ಹೇಳಿದ್ದಾರೆ.

ಹಿಂದುತ್ವದ ಗೆಲುವು ಮತ್ತು ಜಾತ್ಯತೀತತೆಯ ಸೋಲಾಗಿ ಈ ದಿನ ಗುರುತಿಸಿಕೊಳ್ಳಲಿದೆ. ಮೋದಿಯವರು ಹಿಂದೂ ರಾಷ್ಟ್ರಕ್ಕೆ ಶಿಲಾನ್ಯಾಸ ಮಾಡಿದ್ದಾರೆ. ಬಹುಸಂಖ್ಯಾತವಾದದ ಗೆಲುವು ಇದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಂದಿರವು ದೇಶದ ಸಂಕೇತ ಎಂದು ಹೇಳುವ ಮೂಲಕ ತಮ್ಮ ಧರ್ಮ ಮತ್ತು ಸಿದ್ಧಾಂತವನ್ನು ಪ್ರಧಾನಿಯವರು ದೇಶದ ಮೇಲೆ ಹೇರಿದ್ದಾರೆ. ಈ ಮೂಲಕ ಅವರು ಬಹುಸಂಖ್ಯಾತವಾದವನ್ನು ಅನುಮೋದಿಸಿದ್ದಾರೆ ಎಂದು ಒವೈಸಿ ಟೀಕಿಸಿದ್ದಾರೆ.

‘ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಅಲ್ಲಿ ಏನು ಮಾಡುತ್ತಿದ್ದರು? ಯಾವ ನವ ಭಾರತದ ಬಗ್ಗೆ ಅವರು ಮಾತನಾಡಿದ್ದಾರೆ’ ಎಂದು ಒವೈಸಿ ಪ್ರಶ್ನಿಸಿದ್ದಾರೆ.

ವಿಎಚ್‌ಪಿ ಕಚೇರಿಯಲ್ಲಿ ಸಂಭ್ರಮ

ದಕ್ಷಿಣ ದೆಹಲಿಯಲ್ಲಿರುವ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಕಚೇರಿಯಲ್ಲಿ ಬುಧವಾರ ಸಂಭ್ರಮ ಮನೆ ಮಾಡಿತ್ತು. ಆರ್‌.ಕೆ.ಪುರಂನಲ್ಲಿರುವ ಸಂಕಟಮೋಚನ ದೇವಾಲಯ ಸಮೀಪದಲ್ಲಿ ವಿಎಚ್‌ಪಿ ಕಚೇರಿ ಇದೆ. 1980ರ ದಶಕದಲ್ಲಿ ರಾಮಜನ್ಮಭೂಮಿ ಚಳವಳಿ ಆರಂಭವಾದಾಗಿನಿಂದಲೂ ಇದು ಹೋರಾಟದ ಕೇಂದ್ರವಾಗಿತ್ತು. ವಿಷ್ಣು ಹರಿ ದಾಲ್ಮಿಯಾ, ಅಶೋಕ್‌ ಸಿಂಘಾಲ್‌ ಮುಂತಾದವರು ಇಲ್ಲಿಂದಲೇ ಕೆಲಸ ಮಾಡುತ್ತಿದ್ದರು.

ರಾಮತ್ವದ ಮರುಸ್ಥಾಪನೆ

‘ಶ್ರೀರಾಮನ ಆದರ್ಶ ಮತ್ತು ಬೋಧನೆಗಳನ್ನು ನಾವು ಈಗ ಜನರತ್ತ ತಂದಿದ್ದೇವೆ. ಭಾರತದಲ್ಲಿ ರಾಮತ್ವವು ಮರುಸ್ಥಾಪನೆ ಆಗಬೇಕಿದೆ’ ಎಂದು ವಿಎಚ್‌ಪಿ ಕಾರ್ಯಾಧ್ಯಕ್ಷ ಅಲೋಕ್‌ ಕುಮಾರ್‌ ಹೇಳಿದ್ದಾರೆ.

ಮಂದಿರ ನಿರ್ಮಾಣವಷ್ಟೇ ವಿಎಚ್‌ಪಿಯ ಗುರಿಯಲ್ಲ. ರಾಮರಾಜ್ಯವೂ ಸ್ಥಾಪನೆಯಾಗಬೇಕು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.