ADVERTISEMENT

ವೈಭವಯುತ–ಬೃಹತ್‌ ರಾಮಮಂದಿರ ನಿರ್ಮಾಣ: ವಾಸ್ತುಶಿಲ್ಪಿ

ಪಿಟಿಐ
Published 31 ಜುಲೈ 2020, 22:03 IST
Last Updated 31 ಜುಲೈ 2020, 22:03 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಅಹಮದಾಬಾದ್:ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಅಯೋಧ್ಯೆಯ ರಾಮಮಂದಿರದ ವಿನ್ಯಾಸವನ್ನು ಮಾರ್ಪಡಿಸಲಾಗಿದ್ದು, ಈಗ ನಿರ್ಮಿಸಲು ಯೋಜಿಸಿರುವ ಮಂದಿರ ದುಪ್ಪಟ್ಟು ದೊಡ್ಡದಾಗಿದೆ ಎಂದು ಅದರ ವಾಸ್ತುಶಿಲ್ಪಿ ಶುಕ್ರವಾರ ತಿಳಿಸಿದ್ದಾರೆ.

ನಾಗರವಾಸ್ತುಶಿಲ್ಪದ ಶೈಲಿಯಲ್ಲಿ ಈ ಮಂದಿರವನ್ನು ನಿರ್ಮಿಸಲಾಗುವುದು. ಈ ಮೊದಲು ನಿರ್ಧರಿಸಿದಂತೆ ಮೂರು ಗುಮ್ಮಟಗಳ ಬದಲಾಗಿ ಐದು ಗುಮ್ಮಟಗಳನ್ನು ಹೊಂದಿರಲಿದೆ.ಹೆಚ್ಚಿನ ಸಂಖ್ಯೆಯ ಭಕ್ತರಿಗೆ ಸ್ಥಳಾವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದ್ಧಾರೆ.

ಚಂದ್ರರಶೇಖರ ಸೊಂಪೂರ (77) ಅವರು ಈ ಮಂದಿರದ ವಾಸ್ತುಶಿಲ್ಪಿ. ಸುಮಾರು 200 ಕ್ಕೂ ಹೆಚ್ಚು ದೇವಾಲಯವನ್ನು ಇವರ ಕುಟುಂಬದವರು ವಿನ್ಯಾಸಗೊಳಿಸಿದ್ಧಾರೆ.

ADVERTISEMENT

‘ವಿಎಚ್‌ಪಿ ದಿವಂಗತ ಮುಖಂಡ ಅಶೋಕ್‌ ಸಿಂಘಾಲ್‌ ಅವರು 30 ವರ್ಷಗಳ ಹಿಂದೆಯೇ ರಾಮ ಮಂದಿರದ ವಿನ್ಯಾಸವನ್ನು ಸಿದ್ಧಪಡಿಸುವಂತೆ ಕೇಳಿಕೊಂಡಿದ್ದರು. ಮೊದಲ ಬಾರಿಗೆ ಮಂದಿರಕ್ಕೆ ಭೇಟಿ ನೀಡಿದಾಗ ಭದ್ರತೆಯ ದೃಷ್ಟಿಯಿಂದ ಆವರಣದೊಳಗೆ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅನುಮತಿ ಇರಲಿಲ್ಲ. ಹಾಗಾಗಿ,ಅಳತೆ ಟೇಪ್ ಬದಲಾಗಿ ಹೆಜ್ಜೆಗಳ ಮೂಲಕ ಅಳತೆ ಮಾಡಿದೆ.ನಾನು ತಯಾರಿಸಿದ ವಿನ್ಯಾಸವನ್ನು ಆಧರಿಸಿ, 1990ರಲ್ಲೇ ವಿಎಚ್‌ಪಿ ಅಯೋಧ್ಯೆಯಲ್ಲಿ ಕಲ್ಲುಗಳನ್ನು ಕೆತ್ತಿಸುವ ಘಟಕವನ್ನು ಸ್ಥಾಪಿಸುವ ಮೂಲಕ ಅದರ ನಿರ್ಮಾಣಕ್ಕೆ ಸಿದ್ಧತೆ ಆರಂಭಿಸಿತ್ತು’ ಎಂದು ಮಾಹಿತಿ ನೀಡಿದರು.

ಮಂದಿರ ನಿರ್ಮಾಣ ಕಾಮಗಾರಿ ಪ್ರಾರಂಭವಾದ ನಂತರ ಮೂರುವರೆ ವರ್ಷದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.ಪರಿಷ್ಕೃತ ವಿನ್ಯಾಸವನ್ನು ಕಳೆದ ಜೂನ್‌ ತಿಂಗಳಿನಲ್ಲಿ ಟ್ರಸ್ಟ್‌ಗೆ‌ ನೀಡಿ, ಅನುಮೋದನೆ ಪಡೆಯಲಾಗಿದೆ ಎಂದು ಹೇಳಿದರು.

ಸೊಂಪೂರ ಅವರ ಸಲಹೆಯಂತೆ ಅವರ ಮಗ ಆಶಿಶ್ ಸೋಂಪುರ ಅವರು ದೇವಾಲಯದ ನಿರ್ಮಾಣದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.

ದಲಿತ ಅಧ್ಯಾತ್ಮ ಗುರು ಆಹ್ವಾನಕ್ಕೆ ಒತ್ತಾಯ

ಲಖನೌ: ‘ರಾಮ ಮಂದಿರದ ಶಂಕು ಸ್ಥಾಪನೆಗೆ ದಲಿತ ಅಧ್ಯಾತ್ಮ ಗುರುಮಹಾಮಂಡೇಶ್ವರ ಕನ್ಹಯ್ಯ ಪ್ರಭುನಂದನ್ ಗಿರಿ ಅವರನ್ನು ಆಹ್ವಾನಿಸುವುದರಿಂದಜಾತಿರಹಿತ ಸಮಾಜವನ್ನು ಸ್ಥಾಪಿಸುವ ಸಾಂವಿಧಾನಿಕ ಉದ್ದೇಶ ಸ್ವಲ್ಪಮಟ್ಟಿಗಾದರೂ ಈಡೇರಿದಂತೆ ಆಗುತ್ತದೆ’ ಎಂದುಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ.

ಆಗಸ್ಟ್‌ 5 ರಂದು ನಡೆಯುವ ಕಾರ್ಯಕ್ರಮಕ್ಕೆ ಆಹ್ವಾನಿಸದ ಕುರಿತುಪ್ರಭುನಂದನ್ ಗಿರಿ ಅವರು ಅಸಮಾಧಾನ ವ್ಯಕ್ತಪಡಿಸದ ಬೆನ್ನಲ್ಲೇ ಮಾಯಾವತಿ ಈ ಹೇಳಿಕೆ ನೀಡಿದ್ದಾರೆ.

‘ಕಾರ್ಯಕ್ರಮಕ್ಕೆ 200 ಸಂತರನ್ನು ಆಹ್ವಾನಿಸಲಾಗಿದ್ದು, ಅವರೊಂದಿಗೆ ಸ್ವಾಮಿ ಕನ್ಹಯ್ಯ ಅವರಿಗೂ ಆಮಂತ್ರಣ ನೀಡಬಹುದಿತ್ತು’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

‘ಆದರೆ, ಇವುಗಳಿಗೆ ತಲೆ ಕೆಡಿಸಿಕೊಳ್ಳುವ ಬದಲು, ನಿರ್ಲಕ್ಷ್ಯ, ತಿರಸ್ಕಾರ ಮತ್ತು ಅನ್ಯಾಯವನ್ನು ಅನುಭವಿಸುತ್ತಿರುವ ದಲಿತ ಸಮಾಜವು, ಶ್ರಮ ಮತ್ತು ಕಾರ್ಯಗಳಮೂಲಕ ತಮ್ಮ ಅಭಿವೃದ್ಧಿಗಾಗಿ ಹೆಚ್ಚು ಗಮನಹರಿಸಬೇಕು ಮತ್ತು ಈ ಸಂದರ್ಭದಲ್ಲಿಯೂ ಅವರು ಭೀಮರಾವ್ ಅಂಬೇಡ್ಕರ್ ತೋರಿಸಿದ ಮಾರ್ಗವನ್ನು ಅನುಸರಿಸಬೇಕು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.