ಮುಂಬೈ: ಹನುಮಂತನ ಜಾತಿ ಕುರಿತು ಪ್ರಸ್ತುತ ನಡೆಯುತ್ತಿರುವ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ಮಿತ್ರ ಪಕ್ಷ ಶಿವಸೇನಾ, ರಾಮಾಯಣದ ಪಾತ್ರಗಳು ಜಾತಿ ಪ್ರಮಾಣಪತ್ರವನ್ನು ಸಿದ್ಧವಾಗಿ ಇಟ್ಟುಕೊಳ್ಳುವುದು ಒಳ್ಳೆಯದು ಎಂದು ವ್ಯಂಗ್ಯವಾಡಿದೆ.
‘ಇಂತಹ ಚರ್ಚೆ ಅನವಶ್ಯ ಹಾಗೂ ಆಧಾರರಹಿತ. ಹನುಮಂತ ಯಾವ ಜಾತಿ ಎಂದು ಚರ್ಚಿಸುವ ಮೂಲಕ, ಉತ್ತರ ಪ್ರದೇಶ ವಿಧಾನಸಭೆ ಹೊಸ ರಾಮಾಯಣ ಬರೆಯಲು ಮುಂದಾಗಿದೆ’ ಎಂದು ಸೇನಾದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.
‘ಅಯೋಧ್ಯೆಯಲ್ಲಿ ಇನ್ನೂ ರಾಮಮಂದಿರ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. ಆಗಲೇ ಇವರೆಲ್ಲಾ ರಾಮನ ಭಕ್ತ ಹನುಮಂತನ ಜಾತಿ ಪತ್ತೆ ಮಾಡಲು ಮುಂದಾಗಿದ್ದಾರೆ.ಇದಕ್ಕೆ ಅರ್ಥವೇನಿದೆ’ ಎಂದು ಸಂಪಾದಕೀಯದಲ್ಲಿ ಪ್ರಶ್ನಿಸಲಾಗಿದೆ.
‘ಈ ಚರ್ಚೆಒಂದು ರೀತಿಯಲ್ಲಿ ಹನುಮಂತನನ್ನು ಅಪಹಾಸ್ಯ ಮಾಡಿದಂತೆ. ಆದರೆ ಹಿಂದುತ್ವದ ರಕ್ಷಕರು ಎಂದು ತಮ್ಮನ್ನು ಕರೆದುಕೊಳ್ಳುವವರು ಸುಮ್ಮನಿದ್ದಾರೆ. ಒಂದು ವೇಳೆ ಮುಸ್ಲಿಮರು ಅಥವಾ ಪ್ರಗತಿಪರರು ಹನುಮಂತನ ಜಾತಿ ಬಗ್ಗೆ ಚರ್ಚೆ ಮಾಡಿದ್ದರೆ ಈ ಹಿಂದುತ್ವದ ರಕ್ಷಕರು ಸುಮ್ಮನಿರುತ್ತಿದ್ದರೇ? ಗಲಾಟೆ ಸೃಷ್ಟಿಸುತ್ತಿದ್ದರು’ ಎಂದೂ ಹೇಳಲಾಗಿದೆ.
**
ಹನುಮಂತ ಯಾವ ಜಾತಿ ಎಂದು ಚರ್ಚಿಸುವ ಮೂಲಕ, ಉತ್ತರ ಪ್ರದೇಶ ವಿಧಾನಸಭೆ ಹೊಸ ರಾಮಾಯಣ ಬರೆಯಲು ಮುಂದಾಗಿದೆ.
–ಸಾಮ್ನಾ ಸಂಪಾದಕೀಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.