ಬೆಂಗಳೂರು: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಜವ ನಿತಿನ್ ಗಡ್ಕರಿ ಅವರ ಮಾತನ್ನು ಕೇಂದ್ರದ ಸರ್ಕಾರದಲ್ಲಿರುವ ಯಾರೂ ಕೇಳುತ್ತಿಲ್ಲ. ಅವರನ್ನು ಬಿಜೆಪಿಯ ಮಾರ್ಗದರ್ಶಕ ಮಂಡಳಿಗೆ ಸೇರಿಸುವ ಪ್ರಯತ್ನ ಆರಂಭವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ, ಬೆಂಗಳೂರು ಪ್ರವಾಹದಿಂದ ಮುಳುಗಿರುವಾಗ ಗಡ್ಕರಿ ಸಂಚಾರ ನಿಯಂತ್ರಣ ಕುರಿತು ಮಾತನಾಡುವುದು ಸರಿಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಕೇಂದ್ರ ಸರ್ಕಾರದಲ್ಲಿ ಅವರ ಮಾತಿಗೆ ಬೆಲೆಯಿಲ್ಲ. ಬಿಜೆಪಿ ಸಂಸದೀಯ ಮಂಡಳಿಯಿಂದಲೂ ಗಡ್ಕರಿ ಅವರನ್ನು ಕೈಬಿಡಲಾಗಿದೆ. ಮಾರ್ಗದರ್ಶಕ ಮಂಡಳಿ ಸೇರುವ ಹಾದಿಯಲ್ಲಿರುವ ಅವರಿಗೆ ಶುಭ ಹಾರೈಕೆ ಎಂದರು.
ಕೇಂದ್ರದಲ್ಲಿ ತಮ್ಮ ಮಾತನ್ನು ಯಾರೂ ಕೇಳುತ್ತಿಲ್ಲ ಎಂಬ ಕಾರಣಕ್ಕಾಗಿ ಗಡ್ಕರಿ ಅವರು ಬಸವರಾಜ ಬೊಮ್ಮಾಯಿ ಬಳಿ ಬಂದು ಮಾತನಾಡುತ್ತಿದ್ದಾರೆ. ಅದರಿಂದ ಏನು ಆಗುತ್ತದೆ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ ಮೋದಿ ಜನಪರವಾದ ಯಾವ ಕೆಲಸವನ್ನೂ ಮಾಡದೆ ಕಾಲಹರಣ ಮಾಡುತ್ತಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಚಾರದಲ್ಲಿ ಪ್ರಧಾನಿಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.