ADVERTISEMENT

ದೇಶ ತೊರೆದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಈಗ 'ಕೈಲಾಸ'ದಲ್ಲಿ ವಾಸ !

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 5:41 IST
Last Updated 4 ಡಿಸೆಂಬರ್ 2019, 5:41 IST
ನಿತ್ಯಾನಂದ
ನಿತ್ಯಾನಂದ   

ಬೆಂಗಳೂರು: ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಗಾಗಿಪೊಲೀಸರು ಹುಡುಕಾಡುತ್ತಿದ್ದಾರೆ. ಇತ್ತ ದೇಶ ತೊರೆದಿರುವ ನಿತ್ಯಾನಂದ ಆಗಾಗ ವಿಡಿಯೊದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕೈಲಾಸದಲ್ಲಿ ವಾಸವಾಗಿದ್ದಾರೆ.

ಕೈಲಾಸ ಎಂಬುದು ನಿತ್ಯಾನಂದ ಸ್ಥಾಪಿಸಿರುವ ಹೊಸ ದೇಶದ ಹೆಸರು. ಕೈಲಾಸದ ಬಗ್ಗೆ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ ಜಗತ್ತಿನಲ್ಲಿರುವ ಹಿಂದೂಗಳಿಗಾಗಿ ನಿರ್ಮಿಸಿರುವ ಗಡಿ ರಹಿತ ದೇಶವಾಗಿದೆ.ತಮ್ಮ ದೇಶದಲ್ಲಿ ಹಿಂದೂ ಸಂಸ್ಕೃತಿಯನ್ನು ಪಾಲನೆ ಮಾಡಲಿರುವ ಹಕ್ಕನ್ನು ಕಳೆದುಕೊಂಡು, ದೇಶದಿಂದ ಉಚ್ಛಾಟಿತರಾಗಿರುವ ಜಗತ್ತಿನ ಎಲ್ಲ ಹಿಂದೂಗಳಿಗಿರುವ ರಾಷ್ಟ್ರವಾಗಿದೆ ಇದು.

ಕೈಲಾಸ ಡಾಟ್ ಆರ್ಗ್ ಎಂಬ ವೆಬ್‌ಸೈಟ್ಏಪ್ರಿಲ್ 2019ರ ನಂತರ ಆರಂಭವಾಗಿದ್ದು ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ. ನಿತ್ಯಾನಂದ ಹಾಗೂ ಕೈಲಾಸ ದೇಶದ ವಿವರಣೆಯೂ ಈ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಆದರೆ ಈ ದೇಶ ಎಲ್ಲಿದೆ ಎಂಬುದರ ಬಗ್ಗೆ ನಿರ್ದಿಷ್ಟ ಮಾಹಿತಿ ಇಲ್ಲಿಲ್ಲ.

ADVERTISEMENT

ಕೆಲವು ವರದಿಗಳ ಪ್ರಕಾರ ನಿತ್ಯಾನಂದ ಈಕ್ವೆಡಾರ್‌ನಲ್ಲಿ ಹೊಸ ದ್ವೀಪ ಖರೀದಿಸಿದ್ದು, ಅದಕ್ಕೆ ರಾಷ್ಟ್ರೀಯ ಮಾನ್ಯತೆ ನೀಡಲು ವಿಶ್ವ ಸಂಸ್ಥೆಗೆಮನವಿ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ವೆಬ್‌ಸೈಟ್‌‌ನಲ್ಲಿ ನೀಡಿರುವ ಮಾಹಿತಿ ನೋಡಿದರೆ ಕೈಲಾಸ ಎಂಬುದು ನಿಜವಾಗಿಯೂ ದೇಶವೇ ಅಥವಾ ಕಲ್ಪಿತ ಕಥೆಯೋ ಎಂಬುದು ಸ್ಪಷ್ಟವಾಗುವುದಿಲ್ಲ.

ಕೈಲಾಸದಲ್ಲಿ ಏನಿದೆ?

ಅಮೆರಿಕದಲ್ಲಿ ಹಿಂದೂ ಆದಿ ಶಿವನ ಆರಾಧಕರಾದ ಅಲ್ಪ ಸಂಖ್ಯಾತರಸಮುದಾಯದ ಸದಸ್ಯರು ಆರಂಭಿಸಿದ ದೇಶವಾಗಿದೆ ಇದು. ಜಾತಿ, ಧರ್ಮ, ಲಿಂಗ ತಾರತಮ್ಯವಿಲ್ಲದೆ ತಮ್ಮ ಭಕ್ತಿ, ಕಲೆ ಮತ್ತು ಸಂಸ್ಕೃತಿಯನ್ನು ಪಾಲನೆ ಮಾಡಲು ಇರುವ ಜಾಗ ಇದಾಗಿದೆ ಎಂದು ವೆಬ್‌ಸೈಟ್‌ನಲ್ಲಿ ವಿವರಣೆ ನೀಡಲಾಗಿದೆ.

ಈ ದೇಶಕ್ಕೆ ಪ್ರತ್ಯೇಕಧ್ವಜ, ಪಾಸ್‌ಪೋರ್ಟ್ ಮತ್ತು ಸಚಿವ ಸಂಪುಟವೂ ಇದೆ. ಆರೋಗ್ಯ, ಶಿಕ್ಷಣ, ಊಟ ಉಚಿತವಾಗಿದ್ದು ಈ ದೇಶದ ಭಾಷೆ ಇಂಗ್ಲಿಷ್, ಸಂಸ್ಕೃತ ಮತ್ತು ತಮಿಳು.

ಕೈಲಾಸದ ಧ್ವಜದಲ್ಲಿ ನಿತ್ಯಾನಂದಮತ್ತು ಶಿವನ ವಾಹನ ನಂದಿಯ ಚಿತ್ರವಿದ್ದು ವೃಷಭ ಧ್ವಜ ಎಂದು ಇದನ್ನು ಕರೆಯಲಾಗಿದೆ. ಈ ಧ್ವಜದ ಚಿತ್ರವನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ಹಾಕಿಸುವ ಮೂಲಕ ಭಕ್ತರು ಕೈಲಾಸಕ್ಕೆ ಬೆಂಬಲ ನೀಡುವಂತೆ ವೆಬ್‌ಸೈಟ್‌ನಲ್ಲಿ ಮನವಿ ಮಾಡಲಾಗಿದೆ.

ಶಿಕ್ಷಣ, ಖಜಾನೆ, ವಿತ್ತ ಹೀಗೆ ಹಲವಾರು ಸರ್ಕಾರಿ ಇಲಾಖೆಗಳು ಕೈಲಾಸದಲ್ಲಿವೆ. ಪ್ರಬುದ್ಧ ನಾಗರಿಕತೆಯ ಇಲಾಖೆ ಎಂಬ ಇಲಾಖೆಯೊಂದಿದ್ದು ಇದು ಸನಾತನ ಹಿಂದೂ ಧರ್ಮಕ್ಕೆ ಸಂಬಂಧಪಟ್ಟದ್ದಾಗಿದೆ.
ಧಾರ್ಮಿಕ ಆರ್ಥಿಕತೆಯೂ ಇಲ್ಲಿದ್ದು ದೇಣಿಗೆಯಾಗಿ ಕ್ರಿಪ್ಟೋಕರೆನ್ಸಿ ಕೂಡಾ ಇಲ್ಲಿ ಸ್ವೀಕರಿಸಲಾಗುತ್ತದೆ.

ಪಾಸ್‌ಪೋರ್ಟ್
ಕೈಲಾಸದ ಪ್ರಜೆಯಾಗಲು ಯಾರಿಗೆ ಬೇಕಾದರೂ ಅರ್ಜಿ ಸಲ್ಲಿಸಬಹುದು. ಕೈಲಾಸದ ಪ್ರಜೆಗಳಿಗೆ ಪರಮಶಿವನ ಆಶೀರ್ವಾದವಿರುವ ಕೈಲಾಸ ಪಾಸ್‌ಪೋರ್ಟ್ ನೀಡಲಾಗುತ್ತಿದ್ದು, ಪಾಸ್‌ಪೋರ್ಟ್ ಹೊಂದಿದವರು ಕೈಲಾಸ ಸೇರಿದಂತೆ 14 ಲೋಕಗಳನ್ನು ಉಚಿತವಾಗಿ ಸುತ್ತಾಡಲು ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.