ADVERTISEMENT

ಅತ್ಯಾಚಾರ ಪ್ರಕರಣ: ‘ಗೌಪ್ಯ‘ ವಿಚಾರಣೆಗೆ ತರುಣ್‌ ತೇಜ್‌ಪಾಲ್‌ ಮನವಿ

ಪಿಟಿಐ
Published 10 ಆಗಸ್ಟ್ 2021, 10:55 IST
Last Updated 10 ಆಗಸ್ಟ್ 2021, 10:55 IST
ತರುಣ್ ತೇಜ್‌ಪಾಲ್‌
ತರುಣ್ ತೇಜ್‌ಪಾಲ್‌   

ಪಣಜಿ: ಅತ್ಯಾಚಾರ ಪ್ರಕರಣದಲ್ಲಿ ತನ್ನನ್ನು ಖುಲಾಸೆಗೊಳಿಸಿರುವುದರ ಬಗ್ಗೆ ಮರುತನಿಖೆ ನಡೆಸುವಂತೆ ಕೋರಿ ಗೋವಾ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ‘ಗೌಪ್ಯವಾಗಿ‘ ನಡೆಸಬೇಕೆಂದು ಮಂಗಳವಾರ ಪತ್ರಕರ್ತ ತರುಣ್ ತೇಜ್‌ಪಾಲ್ ಬಾಂಬೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಂ.ಎಸ್.ಸೋನಾಕ್‌ ಮತ್ತು ಎಂ.ಎಸ್. ಜಾವಲ್ಕರ್‌ ಅವರನ್ನೊಳಗೊಂಡ ಪೀಠ ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿತು. ತೇಜ್‌ಪಾಲ್ ಪರ ವಕೀಲ ಅಮಿತ್ ದೇಸಾಯಿ ಅವರು ತನ್ನ ಕಕ್ಷಿದಾರರ ವಿಚಾರಣೆಯನ್ನು ‘ಗೌಪ್ಯ‘ವಾಗಿ ನಡೆಸುವಂತೆ ಪೀಠಕ್ಕೆ ಮನವಿ ಮಾಡಿದರು.

ಗೋವಾ ಸರ್ಕಾರದ ಪರ ಹಾಜರಾಗಿದ್ದ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ, ತೇಜ್‌ಪಾಲ್ ಅವರ ಮನವಿಗೆ ವಿರೋಧ ವ್ಯಕ್ತಪಡಿಸಿದ್ದು, ‘ಸಂತ್ರಸ್ತೆಯೊಂದಿಗೆ ನ್ಯಾಯಾಲಯ ಯಾವ ರೀತಿ ನಡೆದುಕೊಳ್ಳುತ್ತದೆ ಎಂಬುದನ್ನು ತಿಳಿದುಕೊಳ್ಳಲು ದೇಶಕ್ಕೆ ಹಕ್ಕಿದೆ‘ ಎಂದು ಹೇಳಿದರು.

ADVERTISEMENT

ವಿಷಯದ ಸೂಕ್ಷ್ಮತೆ ಮತ್ತು ಕಾರಣವನ್ನು ಪರಿಗಣಿಸಿ ವಿಚಾರಣೆಯನ್ನು ‘ಗೌಪ್ಯ‘ವಾಗಿ ನಡೆಸಬೇಕು ಎಂದು ಅಮಿತ್‌ ದೇಸಾಯಿ ಪೀಠಕ್ಕೆ ಮನವಿ ಮಾಡಿದರು. ‘ಕಕ್ಷಿದಾರರು, ತಮ್ಮ ವಿನಂತಿ ಪರಿಗಣಿಸಲು ಪೀಠದ ಮುಂದೆ ಔಪಚಾರಿಕ ಅರ್ಜಿಯನ್ನು ಸಲ್ಲಿಸಿದ್ದಾರೆ‘ ಎಂದು ಅವರು ಹೇಳಿದರು.

2013ರಲ್ಲಿ ಗೋವಾದ ಐಷಾರಾಮಿ ಹೋಟೆಲ್‌ನ ಲಿಫ್ಟ್‌ನೊಳಗೆ ಮಹಿಳಾ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವನ್ನು ತರುಣ್ ತೇಜ್‌ಪಾಲ್‌ ಎದುರಿಸುತ್ತಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಗೋವಾದ ಸೆಷನ್ಸ್‌ ನ್ಯಾಯಾಲಯ ಮೇ 21ರಂದು ಎಲ್ಲ ಲೈಂಗಿಕ ದೌರ್ಜನ್ಯ ಆರೋಪಗಳಿಂದ ತರುಣ್ ತೇಜ್‌ಪಾಲ್ ಅವರನ್ನು ಖುಲಾಸೆಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.