ADVERTISEMENT

ಮಗನನ್ನು ಹತ್ಯೆಗೈದ ಉಗ್ರರನ್ನು ಕ್ಷಮಿಸಲು ಸಿದ್ಧವೆಂದ ಶ್ರೀನಗರದ ಹೋಟೆಲ್ ಮಾಲೀಕ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 10:16 IST
Last Updated 13 ಏಪ್ರಿಲ್ 2021, 10:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಮಗನನ್ನು ಗುಂಡಿಕ್ಕಿ ಕೊಲೆ ಮಾಡಿರುವ ಉಗ್ರರನ್ನು ಕ್ಷಮಿಸಲು ಸಿದ್ಧ ಎಂದು ಶ್ರೀನಗರದ ಪ್ರಸಿದ್ಧ ಕೃಷ್ಣ ಡಾಬಾ ಸಸ್ಯಾಹಾರಿ ರೆಸ್ಟೋರೆಂಟ್‌ನ ಮಾಲೀಕ ರಮೇಶ ಕುಮಾರ್ ಹೇಳಿಕೆ ನೀಡಿದ್ದಾರೆ.

ಫೆಬ್ರವರಿ 17ರಂದು ಸಂಜೆ ದುರ್ಗಾನಾಗ್ ಪ್ರದೇಶದಲ್ಲಿರುವ ಸ್ಥಿತಗೊಂಡಿರುವ ಐಷಾರಾಮಿ ಉಪಹಾರ ಗೃಹದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ರಮೇಶ್ ಅವರ ಪುತ್ರ ಆಕಾಶ್ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಫೆಬ್ರವರಿ 28ರಂದು ಮೃತಪಟ್ಟಿದ್ದರು.

'ಆಕಾಶ್‌ನ ಹತ್ಯೆಯಲ್ಲಿ ಭಾಗಿಯಾದವರೆಲ್ಲ ಅವರ ಹೆತ್ತವರ ಮಕ್ಕಳಾಗಿದ್ದಾರೆ. ಅವರ ವಿರುದ್ಧ ನನಗೆ ಯಾವುದೇ ದೂರುಗಳಿಲ್ಲ. ಸರ್ಕಾರ ಅವರನ್ನು ಬಿಡುಗಡೆ ಮಾಡಲು ಬಯಸಿದರೂ ನನಗೆ ಯಾವುದೇ ಅಭ್ಯಂತರವಿಲ್ಲ' ಎಂದು ರಮೇಶ್ ಹೇಳಿದ್ದಾರೆ.

ADVERTISEMENT

ಮಗನ ಹತ್ಯೆಯ ಹೊರತಾಗಿಯೂ ತಾವು ಹುಟ್ಟಿ ಬೆಳೆದ ಕಣಿವೆ ರಾಜ್ಯವು ಹೆಚ್ಚು ಸುರಕ್ಷಿತ ಎಂದು ಅಭಿಪ್ರಾಯಪಟ್ಟಿದ್ದಾರೆ. 'ಈ ಕಣಿವೆ ಸುರಕ್ಷಿತವೆಂದು ಭಾವಿಸುತ್ತೇನೆ. ಇದು ನನ್ನ ಜಾಗ. ಇಲ್ಲೇ ಹುಟ್ಟಿ ಬೆಳೆದಿದ್ದೇನೆ. ನನಗೆ ಯಾವುದೇ ರೀತಿಯ ಬೆದರಿಕೆಯಿಲ್ಲ' ಎಂದು ಹೇಳಿದ್ದಾರೆ.

ಆಕಾಶ್ ಹತ್ಯೆ ಪ್ರಕರಣದ ಎರಡು ದಿನಗಳೊಳಗೆ ಆರೋಪಿಗಳಾದ ಮೂವರು ಉಗ್ರರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದರು.

ಗರಿಷ್ಠ ಭದ್ರತಾ ವಲಯ ದುರ್ಗಾನಾಗ್ ಪ್ರದೇಶದಲ್ಲಿ ಕೃಷ್ಣ ಡಾಬಾ ಸ್ಥಿತಗೊಂಡಿದೆ. ಸೇನೆಯ 15 ಕಾರ್ಪ್ ಕೇಂದ್ರ ಕಚೇರಿಯು ಕೇವಲ ಒಂದು ಕಿ.ಮೀ. ದೂರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.