ADVERTISEMENT

ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜು ಬೇಕೇ ಅಥವಾ ಮದರಸಾಗಳೇ: ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಚುನಾವಣೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 14:39 IST
Last Updated 29 ಮಾರ್ಚ್ 2021, 14:39 IST
ಹಿಮಂತ ಬಿಸ್ವ ಶರ್ಮಾ (ಪಿಟಿಐ ಚಿತ್ರ)
ಹಿಮಂತ ಬಿಸ್ವ ಶರ್ಮಾ (ಪಿಟಿಐ ಚಿತ್ರ)   

ಗುವಾಹಟಿ: ಅಸ್ಸಾಂನಲ್ಲಿ ನಿಜವಾಗಿ ಸ್ಪರ್ಧೆ ಏರ್ಪಟ್ಟಿರುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ಎಐಯುಡಿಎಫ್ ನಾಯಕ ಬದ್ರುದ್ದೀನ್ ಅಜ್ಮಲ್ ನಡುವೆ ಎಂದು ಸಚಿವ, ಬಿಜೆಪಿಯ ಚುನಾವಣಾ ತಂತ್ರಗಾರ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.

ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯುವ ಎರಡು ದಿನಗಳ ಮುನ್ನ ಚುನಾವಣಾ ಪ್ರಚಾರ ರ್‍ಯಾಲಿಗಳಲ್ಲಿ ಮಾತನಾಡಿದ ಅವರು ಅಜ್ಮಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬುಡಕಟ್ಟು ಜನರ ಪ್ರಾಬಲ್ಯವಿರುವ ಕರ್ಬಿ ಆಂಗ್‌ಲಾಂಗ್‌ ಜಿಲ್ಲೆಯ ಬೊಕಾಲಿಘಾಟ್ ಮತ್ತು ದರಾಂಗ್‌ ಜಿಲ್ಲೆಯ ಸಿಪಾಝಾರ್‌ಗಳಲ್ಲಿ ಚುನಾವಣಾ ಪ್ರಚಾರ ರ್‍ಯಾಲಿ ಹಾಗೂ ಸಭೆಗಳಲ್ಲಿ ಅವರು ಭಾಗವಹಿಸಿದ್ದಾರೆ.

ADVERTISEMENT

‘ಇದು ಬಿಜೆಪಿ ಮತ್ತು ಕಾಂಗ್ರೆಸ್-ಎಐಯುಡಿಎಫ್ ನಡುವಣ ಪೈಪೋಟಿಯಷ್ಟೇ ಅಲ್ಲ. ಮೋದಿ ಮತ್ತು ಅಜ್ಮಲ್ ಅವರು ಪ್ರತಿನಿಧಿಸುತ್ತಿರುವ ಸಿದ್ಧಾಂತಗಳ ನಡುವಣ ಪೈಪೋಟಿ. ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಮದರಸಾಗಳನ್ನು ತೆರೆಯುತ್ತೇವೆ ಎಂದು ಅಜ್ಮಲ್ ಹೇಳುತ್ತಿದ್ದಾರೆ. ಆದರೆ, ನಮಗೆ ಇನ್ನಷ್ಟು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳ ಅಗತ್ಯವಿದೆ ಎಂದು ಮೋದಿ ಅವರು ಹೇಳುತ್ತಾರೆ. ಅಜ್ಮಲ್ ಅವರು ಕೆಲವು ಮೊಹಲ್ಲಾಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆಯೇ ಹೊರತು ವೈದ್ಯರು ಅಥವಾ ಎಂಜಿನಿಯರ್‌ಗಳನ್ನಲ್ಲ. ಅಧಿಕಾರಕ್ಕೆ ಬಂದರೆ ಹೆಚ್ಚು ಮಕ್ಕಳಿಗೆ ಜನ್ಮ ನೀಡುವಂತೆ ಮಹಿಳೆಯರನ್ನು ಪ್ರೇರೇಪಿಸಲಾಗುವುದು ಎಂದು ಅಜ್ಮಲ್ ಹೇಳುತ್ತಾರೆ. ನಮ್ಮ ಸಮಾಜ ಎತ್ತ ಸಾಗುತ್ತಿದೆ ಮತ್ತು ಅವರು ಅಧಿಕಾರಕ್ಕೆ ಬಂದರೆ ಜನರ ಹಾಗೂ ಯುವಕರ ಕತೆ ಏನಾಗಲಿದೆ ಎಂಬುದನ್ನು ಊಹಿಸಿಕೊಳ್ಳಿ’ ಎಂದು ಶರ್ಮ ಹೇಳಿದ್ದಾರೆ.

ಸರ್ಕಾರಿ ಅನುದಾನಿತ ಮದರಸಾಗಳನ್ನು ಮುಚ್ಚಿದ್ದ ಬಿಜೆಪಿ ಸರ್ಕಾರ, ಸರ್ಕಾರದ ಹಣದಿಂದ ಧಾರ್ಮಿಕ ಶಿಕ್ಷಣ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.