ADVERTISEMENT

ಅವಮಾನವೇ ಬಂಡಾಯಕ್ಕೆ ಕಾರಣ: ಪತ್ರ ಬರೆದ ಶಿವಸೇನಾ ಶಾಸಕ

ಪಿಟಿಐ
Published 23 ಜೂನ್ 2022, 17:28 IST
Last Updated 23 ಜೂನ್ 2022, 17:28 IST
ಉದ್ಧವ್‌ ಠಾಕ್ರೆ
ಉದ್ಧವ್‌ ಠಾಕ್ರೆ    

ಮುಂಬೈ: ‘ಕಳೆದ ಎರಡೂವರೆ ವರ್ಷಗಳಿಂದ ಶಾಸಕರು ಎದುರಿಸಿದ ಅವಮಾನವೇ, ಪಕ್ಷದ ನಾಯಕತ್ವದ ವಿರುದ್ಧ ಸಚಿವ ಏಕನಾಥ ಶಿಂಧೆ ನೇತೃತ್ವದಲ್ಲಿ ಬಂಡಾಯವೇಳಲು ಕಾರಣ’ ಎಂದು ಶಿವಸೇನಾದ ಬಂಡಾಯ ಶಾಸಕ ಸಂಜಯ್ ಶಿರಸಾಟ್ ಹೇಳಿದ್ದಾರೆ.

ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಪತ್ರವೊಂದನ್ನು ಬರೆದಿರುವ ಅವರು, ತಮ್ಮ ಬಂಡಾಯಕ್ಕೆ ಕಾರಣಗ
ಳೇನು ಎಂಬುದನ್ನು ವಿವರಿಸಿದ್ದಾರೆ. ಜೂನ್‌ 22ರಂದು ಬರೆದಿರುವ ಈ ಪತ್ರವನ್ನು ಅವರು ತಮ್ಮ ಟ್ವಿಟರ್‌ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.

‘ಎಲ್ಲ ಶಾಸಕರ ಹಕ್ಕುಗಳ ರಕ್ಷಣೆಗಾಗಿ ಬಂಡಾಯದ ಬಾವುಟ ಹಾರಿಸಬೇಕು ಎಂಬುದಾಗಿ ನಾವೇ ಶಿಂಧೆ ಅವರ ಮನವೊಲಿಸಿದೆವು’ ಎಂದೂ ವಿವರಿಸಿದ್ದಾರೆ.

ADVERTISEMENT

‘ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಶಿವಸೇನಾ ಶಾಸಕರಿಗೆ ಅವಕಾಶವೇ ಸಿಗುತ್ತಿರಲಿಲ್ಲ. ಶಿವಸೇನಾದ
ನಿಜವಾದ ವಿರೋಧಿಗಳಾಗಿರುವ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಶಾಸಕರು ಮುಖ್ಯಮಂತ್ರಿಯನ್ನು ಸುಲಭವಾಗಿ ಭೇಟಿ ಮಾಡಬಹುದಿತ್ತು’ ಎಂದು ಔರಂಗಾಬಾದ್‌ ಕ್ಷೇತ್ರವನ್ನು ಪ್ರತಿನಿಧಿಸುವ ಶಿರಸಾಟ್‌ ಅವರು ಹೇಳಿದ್ದಾರೆ.

‘ನಮ್ಮದೇ ಪಕ್ಷದವರು ಮುಖ್ಯ ಮಂತ್ರಿಯಾಗಿದ್ದರೂ ನಮಗೆ ಸಿ.ಎಂ ಗೃಹ ಕಚೇರಿ ‘ವರ್ಷಾ’ಕ್ಕೆ ಪ್ರವೇಶ ಸಿಗುತ್ತಿರ
ಲಿಲ್ಲ. ಸಚಿವಾಲಯಕ್ಕೆ ಹೋಗುವ ಪ್ರಶ್ನೆಯೇ ಇರಲಿಲ್ಲ. ಯಾಕೆಂದರೆ, ಸಚಿವಾಲಯಕ್ಕೆ ಮುಖ್ಯಮಂತ್ರಿ ಬರುತ್ತಲೇ ಇರಲಿಲ್ಲ’ ಎಂದು ವಿವರಿಸಿದ್ದಾರೆ.

‘ಪಕ್ಷದ ಶಾಸಕರ ದೂರು–ದುಮ್ಮಾನಗಳನ್ನು ಹೇಳಿಕೊಳ್ಳಲು ಏಕನಾಥ ಶಿಂಧೆ ಅವಕಾಶ ಒದಗಿಸಿದರು. ನಮ್ಮ ಕ್ಷೇತ್ರಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳು, ಅನುದಾನ ಬಿಡುಗಡೆಯಲ್ಲಿನ ಅಡ್ಡಿಗಳನ್ನು ನಿವಾರಿಸಿದರು ಹಾಗೂ ಮೈತ್ರಿಕೂಟದ ಅಂಗಪಕ್ಷಗಳಾದ ಕಾಂಗ್ರೆಸ್‌ ಮತ್ತು ಎನ್‌ಸಿಪಿಯಿಂದಾಗಿ ಎದುರಾದ ಸಮಸ್ಯೆಗಳನ್ನು ಶಿಂಧೆ ಆಲಿಸಿದರು’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಉದ್ಧವ್‌ ಠಾಕ್ರೆಯಲ್ಲಿ ವಿಶ್ವಾಸ ಇದೆ- ಕಾಂಗ್ರೆಸ್‌: ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾವಿಕಾಸ್‌ ಆಘಾಡಿಯಲ್ಲಿ (ಎಂವಿಎ) ಬಿಕ್ಕಟ್ಟು ಕಂಡುಬಂದಿರುವ ಬೆನ್ನಲ್ಲೇ, ಮೈತ್ರಿಕೂಟದ ಅಂಗಪಕ್ಷವಾದ ಕಾಂಗ್ರೆಸ್‌ ಎಚ್ಚರಿಕೆಯ ಹೆಜ್ಜೆಯಿಟ್ಟಿದೆ.

‘ಶಿವಸೇನಾದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಲ್ಲಿ ಪಕ್ಷ ವಿಶ್ವಾಸ ಹೊಂದಿದೆ’ ಎಂದು ಗುರುವಾರ ಹೇಳಿದೆ.

‘ಎಂವಿಎ ನೇತೃತ್ವದ ಸರ್ಕಾರವನ್ನು ಉರುಳಿಸಬೇಕು ಎಂಬ ಬಿಜೆಪಿ ಯತ್ನ ಕೈಗೂಡುವುದಿಲ್ಲ. ನಮ್ಮ ನಿಲುವುಗಳನ್ನು ಶಿವಸೇನೆ ಮೇಲೆ ಹೇರಲ್ಲ’ ಎಂದೂ ಕಾಂಗ್ರೆಸ್‌ ಮುಖಂಡರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.