ನವದೆಹಲಿ: ಕೋವಿಡ್ ವ್ಯಾಪಕವಾಗಿದ್ದಾಗ ಸೋಂಕು ತಡೆಯಲು ಭಾರತೀಯ ಸೇನೆಯಲ್ಲಿ ನೇಮಕಾತಿಯನ್ನು ತಡೆಹಿಡಿಯಲಾಗಿದೆಯೇ ಹೊರತು ಸರ್ಕಾರ ಅದನ್ನು ನಿಲ್ಲಿಸಿಲ್ಲ ಎಂದು ಕೇಂದ್ರ ರಕ್ಷಣಾ ಇಲಾಖೆಯ ರಾಜ್ಯ ಸಚಿವ ಅಜಯ್ ಭಟ್ ಸೋಮವಾರ ಸಂಸತ್ತಿಗೆ ಮಾಹಿತಿ ನೀಡಿದರು.
ರಾಜ್ಯಸಭೆಯಲ್ಲಿ ಪೂರಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾಗಿದೆ. ಆದರೆ ಅದು ಇನ್ನೂ ಕೊನೆಗೊಂಡಿಲ್ಲ. ಭಾರತೀಯ ಸೇನೆಯ ನೇಮಕಾತಿಗಾಗಿ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಇದಕ್ಕಾಗಿ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.ಇಂತಹ ಕಾರ್ಯಕ್ರಮಗಳಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಅದರ ತಡೆಗೆ ನಾವು ಸೇನಾ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕಾಯಿತು. ಆದರೆ, ಅದನ್ನು ರದ್ದು ಮಾಡಿಲ್ಲ’ ಎಂದು ತಿಳಿಸಿದರು.
2020ರಲ್ಲಿ ಕೋವಿಡ್ ಭಾರತದಲ್ಲಿ ಕಾಣಿಸಿಕೊಂಡ ನಂತರ ಭಾರತೀಯ ಸೇನಾ ನೇಮಕಾತಿಯನ್ನು 2020–21 ಮತ್ತು 2021–22ರ ಅವಧಿಯಲ್ಲಿ ಸ್ಥಗಿತಗೊಳಿಸಿತ್ತು ಎಂದು ಲಿಖಿತ ಉತ್ತರದಲ್ಲಿ ಸಚಿವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.