ಕೋಲ್ಕತ್ತಾ: ಪಶ್ಚಿಮ ಬಂಗಾಳದ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಬಿಐ ತನ್ನ ತನಿಖೆಯನ್ನು ಮುಂದುವರಿಸಿದ್ದು, ಬಂಗಾಳದಸಂಸದೀಯ ವ್ಯವಹಾರ, ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಪಾರ್ಥ ಚಟರ್ಜಿ ಹಾಗೂ ನೇಮಕಾತಿ ಪರಿಶೀಲನೆಯ ಸಲಹಾ ಸಮಿತಿ ಸದಸ್ಯರ ಹೇಳಿಕೆಗಳಲ್ಲಿ ವ್ಯತ್ಯಾಸಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಚಟರ್ಜಿ ಅವರು ಪಶ್ಚಿಮ ಬಂಗಾಳದ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅಕ್ರಮವಾಗಿ ಶಿಕ್ಷಕರನ್ನು ನೇಮಕ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆಚಟರ್ಜಿ ಅವರನ್ನುಬುಧವಾರ ಮೂರು ಗಂಟೆಗಳ ಕಾಲ ವಿಚಾರಣೆ ಮಾಡಲಾಗಿತ್ತು.
‘ವಿಚಾರಣೆ ಸಮಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಟರ್ಜಿ ಅವರನ್ನು ಪ್ರಶ್ನೆ ಮಾಡಲಾಯಿತು. ಅವರು ಹಾಗೂ ಸಲಹಾ ಸಮಿತಿಯ ಹೇಳಿಕೆಗಳಲ್ಲಿ ವ್ಯತ್ಯಾಸಗಳು ಕಂಡುಬಂದಿವೆ. ಮುಂದಿನ ವಾರ ಮತ್ತೆ ಚಟರ್ಜಿ ಅವರಿಗೆ ಸಮನ್ಸ್ ನೀಡಲಿದ್ದೇವೆ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.
ಸಚಿವ ಪರೇಶ್ ವಿಚಾರಣೆ:ಪಶ್ಚಿಮ ಬಂಗಾಳದ ರಾಜ್ಯ ಸಚಿವ ಪರೇಶ್ ಅಧಿಕಾರಿ ಪುತ್ರಿ ಅಂಕಿತಾ ಅವರು ಅಕ್ರಮವಾಗಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿದಂತೆ, ಅಧಿಕಾರಿ ಅವರನ್ನು ಸಿಬಿಐ ವಿಚಾರಣೆ ಒಳಪಡಿಸಿತು.
ಕೋಲ್ಕತ್ತಾ ಹೈಕೋರ್ಟ್ಅಂಕಿತಾ ಅವರನ್ನು ಸರ್ಕಾರಿ ಅನುದಾನಿತ ಶಾಲೆಯಿಂದ ವಜಾಗೊಳಿಸಿದ್ದು, ಅಂಕಿತಾ ಅವರು ಪಡೆದಿರುವ 41 ತಿಂಗಳ ಸಂಬಳವನ್ನು ಹಿಂದಿರುಗಿಸಲು ಸೂಚಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.