ADVERTISEMENT

ಪರಿಸರಸ್ನೇಹಿಯಲ್ಲದ ಪಟಾಕಿಗಳ ನಿಷೇಧ: ವಿವರ ಕೋರಿದ ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2023, 16:02 IST
Last Updated 31 ಆಗಸ್ಟ್ 2023, 16:02 IST
ವಿಚಾರಣೆ 13 ವರ್ಷ ವಿಳಂಬ: ಕ್ಷಮೆ ಕೋರಿದ ಸುಪ್ರೀಂ ಕೋರ್ಟ್!
ವಿಚಾರಣೆ 13 ವರ್ಷ ವಿಳಂಬ: ಕ್ಷಮೆ ಕೋರಿದ ಸುಪ್ರೀಂ ಕೋರ್ಟ್!   

ನವದೆಹಲಿ (ಪಿಟಿಐ): ‘ನಿಯಮಗಳನ್ನು ಅನುಷ್ಠಾನಗೊಳಿಸದೇ ಇದ್ದರೆ ನಗೆಪಾಟಲಾಗುತ್ತದೆ’ ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿತು. ಪರಿಸರಸ್ನೇಹಿಯಲ್ಲದ ಪಟಾಕಿಗಳ ನಿಷೇಧಕ್ಕೆ ಕೈಗೊಂಡಿರುವ ಕ್ರಮಗಳ ವಿವರ ನೀಡುವಂತೆಯೂ ಸೂಚಿಸಿತು.

ಹಸಿರುಯೇತರ ಪಟಾಕಿಗಳ ತಯಾರಿಕೆ, ಮಾರಾಟ ನಿಷೇಧಿಸಲು ನಿಯಮಗಳನ್ನು ಬಲಪಡಿಸಲು ಕೈಗೊಂಡಿರುವ ವಿವರ ನೀಡಬೇಕು ಎಂದು ಕೇಂದ್ರ ಸರ್ಕಾರ ಹಾಗೂ ಪೆಟ್ರೋ ಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಘಕ್ಕೆ (ಪಿಇಎಸ್‌ಒ) ಸುಪ್ರೀಂ ಕೋರ್ಟ್ ತಿಳಿಸಿತು.

ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ ಮತ್ತು ಎಂ.ಎಂ.ಸುಂದ್ರೇಶ್‌ ಅವರಿದ್ದ ಪೀಠವು ಈ ಸೂಚನೆಯನ್ನು ನೀಡಿತು.

ADVERTISEMENT

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರಿಗೆ, ‘ನಿರ್ಬಂಧಿತ ಪಟಾಕಿಗಳ ಮೇಲಿನ ನಿಷೇಧ ಜಾರಿಗೆ ತರಬೇಕಾದ ವ್ಯವಸ್ಥೆ ಜಾರಿಗೆ ಕೈಗೊಳ್ಳಬೇಕಾಗಿರುವ ಕ್ರಮಗಳ ವಿವರ ನೀಡಬೇಕು’ ಎಂದು ತಿಳಿಸಿತು. 

ಉತ್ಪಾದಕರು ಮತ್ತು ಮಾರಾಟಗಾರರು ಮಾರ್ಗದರ್ಶಿ ಸೂತ್ರಗಳಿಗೆ ಬದ್ಧರಾಗಿರುವಂತಹ ವ್ಯವಸ್ಥೆಯನ್ನು ರೂಪಿಸದೇ ಇದ್ದರೆ ನಗೆಪಾಟಲಿಗೆ ಗುರಿಯಾಗಬೇಕಾಗುತ್ತದೆ ಎಂದು ಪೀಠವು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿತು.

‘ಹಸಿರು ಪಟಾಕಿಗಳಿಗೆ ಸಂಬಂಧಿಸಿದ ರಾಸಾಯನಿಕ ಸೂತ್ರ ಮತ್ತು ಮಾರ್ಗದರ್ಶಿ ನಿಯಮಗಳನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯು ನೀಡಿವೆ. ಈಗ ಪಿಇಎಸ್‌ಒ ಇವುಗಳ ತಯಾರಿಕೆ ಮತ್ತು ಮಾರಾಟದ ಮೇಲ್ವಿಚಾರಣೆಯನ್ನು ನಡೆಸಲಿದೆ ಎಂದು ಉತ್ಪಾದಕರನ್ನು ಪ್ರತಿನಿಧಿಸಿದ್ದ ವಕೀಲ ಶ್ಯಾಮ್‌ ದಿವನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.