ಚೆನ್ನೈ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರು ಅಪರಾಧಿಗಳ ಬಿಡುಗಡೆ ವಿರೋಧಿಸಿ ದನಿ ಎತ್ತದೆ ಮೃದುಧೋರಣೆ ತಳೆದಿರುವ ತಮಿಳುನಾಡು ಕಾಂಗ್ರೆಸ್ ಘಟಕದ (ಟಿಎನ್ಸಿಸಿ) ಅಧ್ಯಕ್ಷಕೆ.ಎಸ್. ಅಳಗಿರಿ ವಿರುದ್ಧ ಪಕ್ಷದ ಹಿರಿಯ ನಾಯಕರು ಸಿಡಿದೆದ್ದಿದ್ದಾರೆ. ಅಧಿಕಾರಕ್ಕಾಗಿ ಟಿಎನ್ಸಿಸಿ ಮತ್ತು ಆಡಳಿತ ಪಕ್ಷ ಡಿಎಂಕೆ ನಡುವೆ ಹೊಂದಾಣಿಕೆ ಇದ್ದು, ಹಂತಕರ ಬಿಡುಗಡೆಯನ್ನು ಅಳಗಿರಿ ವಿರೋಧಿಸುತ್ತಿಲ್ಲವೆಂದು ಅಸಮಾಧಾನಗೊಂಡಿರುವನಾಯಕರುಒಬ್ಬೊಬ್ಬರೇ ಪಕ್ಷ ತ್ಯಜಿಸಲಾರಂಭಿಸಿದ್ದಾರೆ.
‘ಪೆರಾರಿವಾಳನ್ ಬಿಡುಗಡೆಯಾದಾಗ ಅಥವಾ ಇತ್ತೀಚೆಗೆ ಆರು ಅಪರಾಧಿಗಳ ಬಿಡುಗಡೆ ವೇಳೆಯೂ ಅಳಗಿರಿ ನೇತೃತ್ವದ ರಾಜ್ಯ ಘಟಕ ವಿರೋಧಿಸಲಿಲ್ಲ. ಅಳಗಿರಿ ಸ್ವಹಿತಾಸಕ್ತಿ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಕಿಡಿಕಾರಿರುವ ಪಕ್ಷದ ಹಿರಿಯ ಮುಖಂಡ ಆರ್. ಕಾಮರಾಜ್, ಪಕ್ಷದ ತೂತುಕುಡಿ ಉತ್ತರ ಜಿಲ್ಲೆಯ ಅಧ್ಯಕ್ಷ ಸ್ಥಾನ ತೊರೆದಿದ್ದಾರೆ.ನ.18ರಂದೇ ರಾಜೀನಾಮೆ ಸಲ್ಲಿಸಿರುವುದಾಗಿಅವರು ಹೇಳಿದ್ದಾರೆ.
ಅಪರಾಧಿಗಳ ಬಿಡುಗಡೆ ವಿಚಾರದಲ್ಲಿ ಪಕ್ಷವು ಆಡಳಿತ ಪಕ್ಷದೊಂದಿಗೆ ಮೃದುಧೋರಣೆ ತಳೆದಿದೆ ಎನ್ನುವುದನ್ನು ತಳ್ಳಿಹಾಕಿರುವ ಕೆ.ಎಸ್. ಅಳಗಿರಿ, ‘ಆರು ಅಪರಾಧಿಗಳ ಬಿಡುಗಡೆಗೆ ನಮ್ಮ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದೇವೆ’ ಎಂದಿದ್ದಾರೆ.
ಡಿಎಂಕೆ ವಕ್ತಾರ ಜೆ.ಕಾನ್ಸಟಾಂಟಿನ್ ರವೀಂದ್ರನ್, ‘ಮೃದುಧೋರಣೆ ವಿಚಾರವೇ ಇಲ್ಲ. ಇದು ತುಂಬಾ ತಪ್ಪು ಕಲ್ಪನೆ. ಇದಕ್ಕೂ ಕಾಂಗ್ರೆಸ್ ಮತ್ತು ಡಿಎಂಕೆ ಮೈತ್ರಿಗೂ ಯಾವುದೇ ಸಂಬಂಧವಿಲ್ಲ. ರಾಜೀವ್ ಹತ್ಯೆ ಪ್ರಕರಣದ ಅಪರಾಧಿಗೆ ಶಿಕ್ಷೆಯಾಗಬಾರದೆಂದು ಡಿಎಂಕೆ ಎಂದಿಗೂ ಹೇಳಿಲ್ಲ. ಅಪರಾಧಿಗಳು 30 ವರ್ಷ ಜೈಲುವಾಸ ಅನುಭವಿಸಿದ ನಂತರ ಸುಪ್ರೀಂ ಕೋರ್ಟ್ ಅವರನ್ನು ಬಿಡುಗಡೆ ಮಾಡಿದೆ. ಇದನ್ನು ಪಕ್ಷ ಬೆಂಬಲಿಸಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.