ADVERTISEMENT

ಪೂಂಛ್‌ ದಾಳಿ: ವಿಚಾರಣೆಗಾಗಿ ಧಾರ್ಮಿಕ ಮುಖಂಡ ವಶಕ್ಕೆ

ಪಿಟಿಐ
Published 30 ಏಪ್ರಿಲ್ 2023, 18:20 IST
Last Updated 30 ಏಪ್ರಿಲ್ 2023, 18:20 IST
   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಜಿಲ್ಲೆಯಲ್ಲಿ ಸೇನೆಯ ವಾಹನದ ಮೇಲೆ ಈಚೆಗೆ ದಾಳಿ ನಡೆಸಿ ಐವರು ಯೋಧರ ಸಾವಿಗೆ ಕಾರಣರಾದ ದಾಳಿಕೋರರು ಇನ್ನೂ ಪೊಲೀಸರಿಗೆ ಸೆರೆ ಸಿಕ್ಕಿಲ್ಲ. ಇದೇವೇಳೆ, ವಿಚಾರಣೆಗೊಳಪಡಿಸುವ ಸಲುವಾಗಿ ಧಾರ್ಮಿಕ ಮುಖಂಡರೊಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಮಾರ್ಕಾಝ್‌– ಉಲ್‌– ಮಾರ್ರಿಫ್‌ ಮದ್ರಸಾದ ಮೌಲ್ವಿ ಮನ್ಝೂರ್‌ ಅವರಿಗೆ ದಾಳಿಕೋರರ ಜೊತೆ ಸಂಪರ್ಕವಿರುವ ಶಂಕೆ ಮೇಲೆ ಪೊಲೀಸರು ಅವರನ್ನು ಜಮ್ಮು ನಗರದಿಂದ ಬಂಧಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಆದರೆ, ಈ ಬಂಧನದ ಕುರಿತು ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ. 

ಮೂಲಗಳ ಪ್ರಕಾರ, ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೆ ಒಳಗಾದವರನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಮೌಲ್ವಿ ಮನ್ಝೂರ್‌ ಅವರ ಹೆಸರು ಹೊರಬಿದ್ದಿದೆ. ಹೀಗಾಗಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ADVERTISEMENT

ಕಳೆದ 10 ದಿನಗಳಿಂದ ಪ್ರಕರಣಕ್ಕೆ ಸಂಬಂಧಿಸಿ ಸುಮಾರು 250 ಜನರನ್ನು ಭದ್ರತಾ ಪಡೆಗಳು ವಶಕ್ಕೆ ತೆಗೆದುಕೊಂಡಿದ್ದವು. ಅವರಲ್ಲಿ ಏಳು ಮಂದಿಯನ್ನು ಔಪಚಾರಿಕವಾಗಿ ಬಂಧಿಸಲಾಗಿದೆ. ಉಳಿದವರನ್ನು ವಿಚಾರಣೆಗೊಳಪಡಿಸಿದ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.