ADVERTISEMENT

ರಾಜ್ಯಸಭೆ: ಮೊದಲ ಅವಧಿಯಲ್ಲೇ ಮೂರು ಬಾರಿ ಕಲಾಪಕ್ಕೆ ಅಡ್ಡಿ

ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನಿರಾಕರಿಸಿದ ಉಪ ಸಭಾಪತಿ

ಪಿಟಿಐ
Published 15 ಡಿಸೆಂಬರ್ 2022, 15:56 IST
Last Updated 15 ಡಿಸೆಂಬರ್ 2022, 15:56 IST
ರಾಜ್ಯಸಭೆಯಲ್ಲಿ ಗುರುವಾರ ಗದ್ದಲದ ವಾತಾವರಣ ಸೃಷ್ಟಿಯಾಗಿತ್ತು–ಪಿಟಿಐ ಚಿತ್ರ 
ರಾಜ್ಯಸಭೆಯಲ್ಲಿ ಗುರುವಾರ ಗದ್ದಲದ ವಾತಾವರಣ ಸೃಷ್ಟಿಯಾಗಿತ್ತು–ಪಿಟಿಐ ಚಿತ್ರ    

ನವದೆಹಲಿ:ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದೂ ಸೇರಿದಂತೆ ವಿವಿಧ ವಿಷಯಗಳ ಕುರಿತ ಚರ್ಚೆಗೆ ನಿಯಮ 267ರ ಅಡಿಯಲ್ಲಿ ಅವಕಾಶ ನೀಡುವಂತೆ ಕೋರಿ ವಿರೋಧ ಪಕ್ಷಗಳು ಮಂಡಿಸಿದ ನಿಲುವಳಿ ಸೂಚನೆಯನ್ನು ಉಪ ಸಭಾಪತಿ ತಿರಸ್ಕರಿಸಿದ್ದರಿಂದ ರಾಜ್ಯಸಭೆಯಲ್ಲಿ ಗುರುವಾರ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.

ನ್ಯಾಯಾಂಗದನೇಮಕಾತಿಯಲ್ಲಿ ಸರ್ಕಾರದ ಹಸ್ತಕ್ಷೇಪ‍, ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲುಗೊಳಿಸಲು ನಡೆಸುತ್ತಿರುವ ಹುನ್ನಾರದ ಕುರಿತ ಚರ್ಚೆಗೆ ಅವಕಾಶ ನೀಡುವಂತೆ ಆಮ್‌ ಆದ್ಮಿ ಪಕ್ಷದ ರಾಘವ್‌ ಚಡ್ಡಾ , ಕಾಂಗ್ರೆಸ್‌ನ ಪ್ರಮೋದ್‌ ತಿವಾರಿ, ಅಖಿಲೇಶ್‌ ಪ್ರಸಾದ್‌ ಸಿಂಗ್‌, ಎಲ್‌.ಹನುಮಂತಯ್ಯ, ಜೆಬಿ ಮಥೇರ್‌, ಸೈಯದ್‌ ನಾಸೀರ್‌ ಹುಸೇನ್‌ ಹಾಗೂ ಶಿವಸೇನಾದ ಪ್ರಿಯಾಂಕ ಚತುರ್ವೇದಿ ಅವರು ನಿಲುವಳಿ ಸೂಚನೆ ಮಂಡಿಸಿದ್ದರು.

ಸದನದ ಏಳು ಸದಸ್ಯರು ನೀಡಿರುವ ನೋಟಿಸ್‌ಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಉಪಸಭಾಪತಿ ಹರಿವಂಶ್‌ ತಿಳಿಸಿದರು. ಈ ಕುರಿತು ಸ್ಪಷ್ಟನೆ ನೀಡುವಂತೆ ವಿರೋಧ ಪಕ್ಷಗಳ ಸದಸ್ಯರು ಪಟ್ಟು ಹಿಡಿದರು.ನಿಲುವಳಿ ಸೂಚನೆ ಅಂಗೀಕರಿಸುವಂತೆ‍ಒತ್ತಾಯಿಸಿ ಸದನದಲ್ಲಿ ಕೋಲಾಹಲ ಸೃಷ್ಟಿಸಿದರು. ಘೋಷಣೆಗಳನ್ನೂ ಕೂಗಿದರು. ಹೀಗಾಗಿ ಮೊದಲ ಅವಧಿಯಲ್ಲೇ ಮೂರು ಬಾರಿ ಕಲಾಪ ಮುಂದೂಡಲ್ಪಟ್ಟಿತು.

ADVERTISEMENT

ಶೂನ್ಯ ವೇಳೆಯ ಕಲಾಪ ನಡೆಸಲು ಸಹಕರಿಸುವಂತೆ ಉಪ ಸಭಾಪತಿ ಕೋರಿದರು. ಇದಕ್ಕೆ ವಿರೋಧ ಪಕ್ಷಗಳ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಚೀನಾ ಮೇಲೆ ಕೆಂಗಣ್ಣು ಬೀರುವುದು ಯಾವಾಗ?
‘ಮೋದಿ ಸರ್ಕಾರವು ಚೀನಾ ಮೇಲೆ ಕೆಂಗಣ್ಣು ಬೀರುವುದು ಯಾವಾಗ’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಪ್ರಶ್ನಿಸಿದ್ದಾರೆ.

ಅರುಣಾಚಲಪ್ರದೇಶದಲ್ಲಿ ಉಂಟಾಗಿರುವ ಭಾರತ–ಚೀನಾ ಸೇನಾ ಸಂಘರ್ಷದ ವಿಚಾರವನ್ನು ಗುರುವಾರ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಅವರು ಆಡಳಿತಾರೂಢ ಪಕ್ಷದ ವಿರುದ್ಧ ಹರಿಹಾಯ್ದರು.

ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು,‘ಚೀನಾವು ಭಾರತವನ್ನು ನಾಶಪಡಿಸಲು ಪ್ರಯತ್ನಿಸುತ್ತಿದೆ. ದೆಹಲಿ ಏಮ್ಸ್‌ನ ಸರ್ವರ್‌ಗಳ ಮೇಲೆ ನಡೆದಿರುವ ಸೈಬರ್‌ ದಾಳಿಯಲ್ಲಿ ಚೀನಾ ಪಾತ್ರ ಇರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಈ ವಿಚಾರಗಳ ಕುರಿತು ಚರ್ಚೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.