ನವದೆಹಲಿ: ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 8ನೇ ತಿಂಗಳಿಗೆ ಕಾಲಿಟ್ಟಿದ್ದು, ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಿ ಮನೆಗಳಿಗೆ ಹಿಂತಿರುಗಬೇಕೆಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಮನವಿ ಮಾಡಿದ್ದಾರೆ.
ಮೂರು ಕೃಷಿ ಕಾನೂನುಗಳ ನಿಬಂಧನೆ ಕುರಿತು ಮಾತುಕತೆ ಪುನರಾರಂಭಿಸಲು ಸರ್ಕಾರ ಸಿದ್ಧವಿರುವುದಾಗಿ ತಿಳಿಸಿರುವ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಕೂಡ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ರೈತರಿಗೆ ಮನವಿ ಮಾಡಿದ್ದಾರೆ.
'ರೈತರು ತಮ್ಮ ಮನೆಗಳಿಗೆ ಮರಳುವಂತೆ ನಾನು ಮನವಿ ಮಾಡುತ್ತೇನೆ. ಈ ಕಾನೂನುಗಳು ರೈತ ಪರವಾಗಿವೆ ಮತ್ತು ದೇಶದಾದ್ಯಂತ ಇರುವ ರೈತರು ಇವುಗಳನ್ನು ಸ್ವಾಗತಿಸಿದ್ದಾರೆ. ಪ್ರತಿಭಟನಾ ನಿರತ ರೈತರು ತಮ್ಮ ಸಲಹೆಗಳನ್ನು ನೀಡಬಹುದು' ಎಂದು ಗೋಯಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರೈತರ ಪ್ರತಿಭಟನೆಯನ್ನು ಕೊನೆಗೊಳಿಸುವ ಸಲುವಾಗಿ ಸರ್ಕಾರ ಮತ್ತು ರೈತ ಸಂಘಟನೆಗಳು ಇಲ್ಲಿಯವರೆಗೆ 11 ಸುತ್ತಿನ ಮಾತುಕತೆ ನಡೆಸಿವೆ, ಕೊನೆಯದು ಜನವರಿ 22 ರಂದು ನಡೆಯಿತು. ಆದರೆ ಈವರೆಗೂ ಮಾತುಕತೆ ಫಲಪ್ರದವಾಗಿಲ್ಲ. ಜನವರಿ 26ರಂದು ನಡೆದ ರೈತರ ಪ್ರತಿಭಟನೆ ವೇಳೆ ವ್ಯಾಪಕ ಹಿಂಸಾಚಾರದ ನಂತರ ಮಾತುಕತೆ ಪುನರಾರಂಭಗೊಂಡಿಲ್ಲ.
ಮುಖ್ಯವಾಗಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ಕಳೆದ ಏಳು ತಿಂಗಳಿನಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.