ADVERTISEMENT

ಕೇರಳ: ಭೂಕುಸಿತದಿಂದ ಇಡುಕ್ಕಿಯಲ್ಲಿ ಸತ್ತವರ ಸಂಖ್ಯೆ 42ಕ್ಕೆ ಏರಿಕೆ

ಏಜೆನ್ಸೀಸ್
Published 9 ಆಗಸ್ಟ್ 2020, 10:55 IST
Last Updated 9 ಆಗಸ್ಟ್ 2020, 10:55 IST
ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದು.
ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದು.   

ಇಡುಕ್ಕಿ: ಇಲ್ಲಿ ಶುಕ್ರವಾರ ಸಂಭವಿಸಿದ ಭೂಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 42ಕ್ಕೆ ಏರಿದೆ. ಭೂಕುಸಿತದಲ್ಲಿ ಟೀ ಎಸ್ಟೇಟ್ ಕಾರ್ಮಿಕರ 20 ಮನೆಗಳು ನೆಲಸಮವಾಗಿವೆ.

ನಾಪತ್ತೆಯಾದವರ ಹುಡುಕಾಟ ಕಾರ್ಯದಲ್ಲಿ ಪೊಲೀಸ್, ಅಗ್ನಿಶಾಮಕ ಸೇವೆ ಸಿಬ್ಬಂದಿ ಜೊತೆಗೆ ಸ್ಥಳೀಯರೂ ಕೈಜೋಡಿಸಿದ್ದಾರೆ. ಜೊತೆಗೆ ರಾಷ್ಟ್ರೀಯ ಪ್ರಾಕೃತಿಕ ವಿಕೋಪ ರಕ್ಷಣಾ ಪಡೆಯ (ಎನ್.ಡಿ.ಆರ್.ಎಫ್) ಎರಡು ತುಕಡಿಗಳನ್ನು ನಿಯೋಜಿಸಲಾಗಿದೆ.

ಭಾನುವಾರ ಮಧ್ಯಾಹ್ನದವರೆಗೂ 15ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಶನಿವಾರ 20 ಹಾಗೂಶುಕ್ರವಾರ 7 ಮೃತದೇಹಗಳನ್ನು ಹೊರತೆಗೆಯಲಾಗಿತ್ತು.ಇನ್ನೂ 20 ಜನರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಮಳೆಯ ನಡುವೆಯೂ ಹುಡುಕಾಟ ನಡೆದಿದೆ.

ADVERTISEMENT

ಶುಕ್ರವಾರ ರಕ್ಷಿಸಲಾಗಿದ್ದ 12 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಎಂದು ಜಿಲ್ಲಾಧಿಕಾರಿ ಎಚ್.ದಿನೇಶನ್ ತಿಳಿಸಿದ್ದಾರೆ. ಹವಾಮಾನ ಇಲಾಖೆಯು ಜಿಲ್ಲೆಯಲ್ಲಿ ಭಾನುವಾರದವರೆಗೆ ರೆಡ್ ಅಲರ್ಟ್ ಘೋಷಿಸಿದೆ.

ಪೆಟ್ಟಿಮುಡಿಯ ಆಕರ್ಷಕ ಭೌಗೋಳಿಕ ಪ್ರದೇಶದ ಚಿತ್ರಣವೇ ಈಗ ಬದಲಾಗಿದ್ದು, ಕುಸಿದಿರುವ ಮಣ್ಣಿನ ನಡುವೆ ಮನೆಯ ಅವಶೇಷಗಳು ಕಾಣಿಸುತ್ತಿವೆ. ಶುಕ್ರವಾರ ಬೆಳಗಿನ ಜಾವ ದೊಡ್ಡ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದ್ದು, ಸಾಲು ಮನೆಗಳು ಕುಸಿದಿದ್ದವು.

ಎನ್.ಡಿ.ಆರ್.ಎಫ್.ನ ದಕ್ಷಿಣ ಭಾರತದ ಮುಖ್ಯಸ್ಥರಾದ ರೇಖಾ ನಂಬಿಯಾರ್ ಅವರು, ‘ರಕ್ಷಣಾ ಕಾರ್ಯಗಳಿಗೆ 55 ಜನರ ತಂಡವನ್ನು ನಿಯೋಜಿಸಲಾಗಿದೆ. ನದಿ ಪಾತ್ರದಲ್ಲಿಯೂ ಹುಡುಕಾಟ ನಡೆದಿದ್ದು, ದೇಹಗಳು ಮಣ್ಣಿನಡಿ ಸಿಲುಕಿರುವ ಸಂಭವವಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.