
ಪಟ್ನಾ: ‘ಅನಾರೋಗ್ಯ ಪೀಡಿತ ತಂದೆಗೆ ನಾನು ಕೊಳಕು ಕಿಡ್ನಿ ನೀಡಿದ್ದೇನೆ ಎಂದು ಆರೋಪಿಸಿರುವವರು, ಈ ಬಗ್ಗೆ ನನ್ನೊಂದಿಗೆ ಮುಕ್ತ ಚರ್ಚೆಗೆ ಬರಲಿ’ ಎಂದು ಆರ್ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಅವರ ಪುತ್ರಿ ರೋಹಿಣಿ ಆಚಾರ್ಯ ಸವಾಲು ಹಾಕಿದ್ದಾರೆ.
ಈ ಮೂಲಕ ಸಹೋದರ ತೇಜಸ್ವಿ ಯಾದವ್, ಅವರ ಆಪ್ತರಾದ ರಾಜ್ಯಸಭಾ ಸದಸ್ಯ ಸಂಜಯ್ ಯಾದವ್ ಮತ್ತು ರಮೀಜ್ ವಿರುದ್ಧ ರೋಹಿಣಿ ಮಂಗಳವಾರವೂ ವಾಗ್ದಾಳಿ ಮುಂದುವರಿಸಿದ್ದಾರೆ.
‘ನನ್ನ ಕಿಡ್ನಿಯನ್ನು ಕೊಳಕು ಎಂದು ಆರೋಪಿಸಿರುವವರು, ಲಾಲೂ ಜಿ ಅವರ ಹೆಸರಿನಲ್ಲಿ ತಮ್ಮ ಕಿಡ್ನಿಯನ್ನು ಅಗತ್ಯವಿರುವ ಲಕ್ಷಾಂತರ ರೋಗಿಗಳಿಗೆ ದಾನ ಮಾಡಲಿ’ ಎಂದು ಆಗ್ರಹಿಸಿದ್ದಾರೆ.
‘ಲಾಲೂ ಜಿ ಹೆಸರಿನಲ್ಲಿ ಏನನ್ನಾದರೂ ಮಾಡಲು ಬಯಸಿರುವ ಜನರು ಸುಳ್ಳು ಹೇಳಿಕೊಂಡು ನಟಿಸುವುದನ್ನು ಮೊದಲು ನಿಲ್ಲಿಸಲಿ. ಹರಿಯಾಣವಿ ಮಹಾಪುರುಷರು (ತೇಜಸ್ವಿ ಆಪ್ತ, ಸಂಸದ ಸಂಜಯ್ ಯಾದವ್), ಅವರ ಅನುಯಾಯಿಗಳು, ಹೊಗಳುಭಟ್ಟ ಪತ್ರಕರ್ತರು ತಮ್ಮ ಕಿಡ್ನಿಯನ್ನು ಅಗತ್ಯವಿರುವ ರೋಗಿಗಳಿಗೆ ದಾನ ಮಾಡಲಿ’ ಎಂದು ಅವರು ‘ಎಕ್ಸ್’ನಲ್ಲಿ ಒತ್ತಾಯಿಸಿದ್ದಾರೆ.
‘ಕೋಟ್ಯಂತರ ರೂಪಾಯಿ ಹಣ ಮತ್ತು ಪಕ್ಷದ ಟಿಕೆಟ್ಗಾಗಿ ತಂದೆಗೆ ಕೊಳಕು ಕಿಡ್ನಿಯನ್ನು ನಾನು ದಾನ ಮಾಡಿದ್ದೇನೆ ಎಂದು ಸಹೋದರ ತೇಜಸ್ವಿ ಯಾದವ್ ಅವರ ಆಪ್ತರು ಆರೋಪಿಸಿದ್ದಾರೆ ಮತ್ತು ನನ್ನನ್ನು ನಿಂದಿಸಿ, ಮನೆಯಿಂದ ಹೊರಗೆ ಹಾಕಿದ್ದಾರೆ’ ಎಂದು ರೋಹಿಣಿ ಈ ಹಿಂದೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ ಆರೋಪಿಸಿದ್ದರು.
‘ನನ್ನ ಪತಿ ಮತ್ತು ಅತ್ತೆಯ ಅನುಮತಿ ಪಡೆಯದೇ, ಮೂವರು ಮಕ್ಕಳ ಬಗ್ಗೆ ಯೋಚಿಸದೇ ನನ್ನ ಕಿಡ್ನಿಯನ್ನು ತಂದೆಗೆ ದಾನ ಮಾಡಿ ಪಾಪ ಮಾಡಿದ್ದೇನೆ. ಯಾವ ಹೆಣ್ಣು ಮಕ್ಕಳಿಗೂ ಇಂಥ ಗತಿ ಬರದಿರಲಿ’ ಎಂದು ರೋಹಿಣಿ ನೋವಿನಿಂದ ಹೇಳಿದ್ದರು.
ಎನ್ಡಿಎ ನಾಯಕರ ಪ್ರತಿಕ್ರಿಯೆ:
‘ಲಾಲೂ ಕುಟುಂಬದಲ್ಲಿ ಏನೆಲ್ಲಾ ಆಗಿದೆಯೋ ಅದು ಸರಿಯಲ್ಲ. ಹಾಗೆ ಆಗಬಾರದಿತ್ತು’ ಎಂದು ಕೇಂದ್ರದ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ರಾಮ್ ಕೃಪಾಲ್ ಯಾದವ್ ಹೇಳಿದ್ದಾರೆ.
‘ಲಾಲೂ ಅವರ ಕುಟುಂಬದ ಆಂತರಿಕ ವಿಷಯದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ’ ಎಂದು ಹೇಳಿದ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್, ‘ಆ ಬೆಳವಣಿಗೆಗಳಿಂದ ತುಂಬಾ ನೋವಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.