ನವದೆಹಲಿ: ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯಲ್ಲಿ ನಡೆದ ₹14 ಕೋಟಿ ಹಗರಣವನ್ನು ಉಲ್ಲೇಖಿಸಿ, ವೃತ್ತಿಪರ ಸಂಸ್ಥೆಗಳಲ್ಲಿ ಆರ್ಎಸ್ಎಸ್ ವ್ಯವಸ್ಥಿತವಾಗಿ ನುಸುಳುತ್ತಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ.
ಹಗರಣದ ಕುರಿತ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಮಾತನಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ‘2014ರಿಂದ ವೃತ್ತಿಪರ ಸಂಸ್ಥೆಗಳಲ್ಲಿ ಆರ್ಎಸ್ಎಸ್ ವ್ಯವಸ್ಥಿತವಾಗಿ ನುಸುಳುತ್ತಿದೆ. ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ(ಐಸಿಎಚ್ಆರ್) ಅದಕ್ಕೊಂದು ಉದಾಹರಣೆ’ ಎಂದಿದ್ದಾರೆ.
‘ಐಸಿಎಚ್ಆರ್ ನಡೆದ ಅಕ್ರಮಗಳ ಬಗ್ಗೆ ಕೇಂದ್ರ ಜಾಗೃತ ದಳ(ಸಿವಿಸಿ) ತನಿಖೆ ನಡೆಸುತ್ತಿದ್ದು, ಆರ್ಎಸ್ಎಸ್ನ ‘ಅಖಿಲ ಭಾರತೀಯ ಇತಿಹಾಸ್ ಸಂಕಲನ್ ಯೋಜನೆ’(ಎಬಿಐಎಸ್ವೈ) ಸದಸ್ಯರ ಮೇಲೆ ದೋಷಾರೋಪಣೆ ಮಾಡಿದೆ. ಇದು ಬರೋಬ್ಬರಿ ₹14 ಕೋಟಿ ಹಗರಣ. ಐಸಿಎಚ್ಆರ್ಗೆ ಇದು ದೊಡ್ಡ ಮೊತ್ತವಾಗಿದೆ’ ಎಂದು ಹೇಳಿದ್ದಾರೆ.
‘ಐಸಿಎಚ್ಆರ್ ಒಂದೇ ಅಲ್ಲ, ಉನ್ನತ ವಿಶ್ವವಿದ್ಯಾಲಯಗಳು ಸೇರಿದಂತೆ ಅನೇಕ ಪ್ರತಿಷ್ಠಿತ ಸಂಸ್ಥೆಗಳನ್ನು ಆರ್ಎಸ್ಎಸ್ ಬೆಂಬಲಿಗರು ನಾಶಪಡಿಸುತ್ತಿದ್ದಾರೆ. ಇದರಲ್ಲಿ ಅಚ್ಚರಿಪಡುವಂತದ್ದು ಏನಿಲ್ಲ’ ಎಂದು ಹೇಳಿದ್ದಾರೆ.
ಐಸಿಎಚ್ಆರ್ನಲ್ಲಿ ನಡೆದ ₹14 ಕೋಟಿ ಹಗರಣವನ್ನು ಸಿವಿಸಿ ತನಿಖೆ ನಡೆಸುತ್ತಿದ್ದು, ಎಬಿಐಎಸ್ವೈನ ಕೆಲವು ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.