ತಿರುವನಂತಪುರ: ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೋಟಿ ಅವರ ನಿವಾಸದಲ್ಲಿ ಶನಿವಾರ ಶೋಧ ಕಾರ್ಯ ನಡೆಸಿದರು.
ತನಿಖಾಧಿಕಾರಿ ಎಸ್.ಶಶಿಧರನ್ ನೇತೃತ್ವದ ಅಧಿಕಾರಿಗಳ ತಂಡವು ಪುಲಿಮಠದಲ್ಲಿರುವ ಪೋಟಿ ಅವರ ನಿವಾಸಕ್ಕೆ ಮಧ್ಯಾಹ್ನ 3ರ ಸುಮಾರಿಗೆ ತೆರಳಿ ಶೋಧ ನಡೆಸಿತು. ಕೆಲ ದಾಖಲೆಗಳು ಹಾಗೂ ಡಿಜಿಟಲ್ ಉಪಕರಣಗಳಿಗಾಗಿ ಹುಡುಕಾಟ ನಡೆಸಿತು.
ನಾಪತ್ತೆಯಾದ ಚಿನ್ನವನ್ನು ಪತ್ತೆ ಹಚ್ಚಲು, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಹಾಗೂ ಇತರೆ ಆರೋಪಿಗಳನ್ನು ಪತ್ತೆ ಮಾಡಲು ಪೋಟಿ ಅವರನ್ನು ಮತ್ತಷ್ಟು ವಿಚಾರಣೆ ನಡೆಸಬೇಕಿದೆ. ಹೀಗಾಗಿ, ಅವರನ್ನು ವಶಕ್ಕೆ ನೀಡಬೇಕೆಂದು ಎಸ್ಐಟಿ ರಾನ್ನಿಯ ಜೆಎಫ್ಸಿಎಂಸಿಗೆ ಶುಕ್ರವಾರ ಮನವಿ ಮಾಡಿತ್ತು. ಪೋಟಿ ಅವರನ್ನು ಎಸ್ಐಟಿ ವಶಕ್ಕೆ ನೀಡಿ ನ್ಯಾಯಾಲಯವು ಆದೇಶಿಸಿತ್ತು. ಅಪರಾಧ ಶಾಖೆಯ ಕಚೇರಿಯಲ್ಲಿ ಪೋಟಿ ಅವರ ವಿಚಾರಣೆ ನಡೆಸಲಾಗುತ್ತಿದೆ.
ಸಾಕ್ಷ್ಯ ಸಂಗ್ರಹಕ್ಕಾಗಿ ಪೋಟಿ ಅವರನ್ನು ಇತರೆ ರಾಜ್ಯಗಳಿಗೆ ಕರೆದೊಯ್ಯಲಾಗುವುದು ಎಂದು ಎಸ್ಐಟಿಯು ನ್ಯಾಯಾಲಯಕ್ಕೆ ತಿಳಿಸಿದೆ.
2019ರಲ್ಲಿ ದ್ವಾರಪಾಲಕ ಮೂರ್ತಿಗಳಿಂದ ಚಿನ್ನ ಲೇಪಿತ ಕವಚವನ್ನು ಮೂರ್ತಿಯಿಂದ ಬೇರ್ಪಡಿಸಿ ಹೊಸದಾಗಿ ಚಿನ್ನ ಲೇಪನಕ್ಕೆಂದು ಚೆನ್ನೈನ ಕಂಪನಿಯೊಂದಿಗೆ ನೀಡಲಾಗಿತ್ತು. ಈ ವೇಳೆ ಚಿನ್ನದ ತೂಕವು 4.5 ಕೆ.ಜಿ.ಯಷ್ಟು ಕಡಿಮೆಯಾಗಿತ್ತು. ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.