ADVERTISEMENT

ಸುಪ್ರೀಂ: 7 ನ್ಯಾಯಮೂರ್ತಿಗಳ ವಿಸ್ತೃತ ನ್ಯಾಯಪೀಠಕ್ಕೆ ಶಬರಿಮಲೆ ಪ್ರಕರಣ ವರ್ಗಾವಣೆ

ಹೆಣ್ಣುಮಕ್ಕಳ ಪ್ರವೇಶ ಅಬಾಧಿತ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 5:52 IST
Last Updated 14 ನವೆಂಬರ್ 2019, 5:52 IST
ಶಬರಿಮಲೆ ದೇವಾಲಯಕ್ಕೆ ಮಹಿಳೆ  ಪ್ರವೇಶ ಕುರಿತ ಹೋರಾಟದ ಸಂದರ್ಭ – ಸಾಂದರ್ಭಿಕ ಚಿತ್ರ
ಶಬರಿಮಲೆ ದೇವಾಲಯಕ್ಕೆ ಮಹಿಳೆ ಪ್ರವೇಶ ಕುರಿತ ಹೋರಾಟದ ಸಂದರ್ಭ – ಸಾಂದರ್ಭಿಕ ಚಿತ್ರ   

ನವದೆಹಲಿ:ಕೇರಳದ ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂದು 2018ರಲ್ಲಿ ನೀಡಿದ್ದ ತೀರ್ಪು ಮರುಪರಿಶೀಲನೆಗೆ ಕೋರಿದ್ದ ಎಲ್ಲ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಗುರುವಾರ (ನ.14),ವಿಸ್ತೃತಪೀಠಕ್ಕೆ ಪ್ರಕರಣ ವರ್ಗಾವಣೆ ಮಾಡಿದೆ.

'ದೇಗುಲ ಪ್ರವೇಶಕ್ಕೆ ಯಾರನ್ನೂ ನಿರ್ಬಂಧಿಸಲು ಸಾಧ್ಯವಿಲ್ಲ. ಇದು ಕೇವಲ ಹಿಂದೂ ಮಹಿಳೆಯರ ದೇಗುಲ ಪ್ರವೇಶ ವಿಚಾರವಷ್ಟೇ ಅಲ್ಲ. ಮುಸ್ಲಿಮರು, ಪಾರ್ಸಿಗಳ ವಿಚಾರವೂ ಇದೆ. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯದ ವಿಚಾರವೂ ಇದರಲ್ಲಿದೆ. ಹೀಗಾಗಿ, ಈ ಬಗ್ಗೆ ವಿಸ್ತೃತವಾದ ಮತ್ತು ವ್ಯಾಪಕವಾದ ಚರ್ಚೆಯಾಗಬೇಕಿರುವುದರಿಂದ ಏಳು ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾಯಿಸಲಾಗಿದೆ' ಎಂದು ಸುಪ್ರೀಂ ಕೋರ್ಟ್ ಹೇಳಿತು.

ವಿಸ್ತೃತ ವಿಚಾರಣೆಗೆ ನ್ಯಾಯಮೂರ್ತಿಗಳಾದ ಚಂದ್ರಚೂಡ್ ಮತ್ತು ನಾರೀಮನ್ ವಿರೋಧ ವ್ಯಕ್ತಪಡಿಸಿದರು.2:3 ಬಹುಮತದಿಂದ ವಿಸ್ತೃತ ಪೀಠಕ್ಕೆ ವಿಚಾರವಣೆ ವರ್ಗಾವಣೆ ಮಾಡಲಾಗಿದೆ.

ಶಬರಿಮಲೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 2018ರಲ್ಲಿ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ಅಥವಾ ಮಾರ್ಪಾಡು ಸೂಚಿಸಿಲ್ಲ. ಧಾರ್ಮಿಕ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಸಂಘರ್ಷದ ವಿಚಾರ ಇರುವುದರಿಂದ ಇನ್ನಷ್ಟು ಚರ್ಚೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು 7 ನ್ಯಾಯಮೂರ್ತಿಗಳಿರುವ ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಿದೆ. ವಿಸ್ತೃತ ನ್ಯಾಯಪೀಠದ ವಿಚಾರಣೆ ಮುಗಿದು, ತೀರ್ಪು ಹೊರಬೀಳುವವರೆಗೆ ಹಿಂದಿನ ತೀರ್ಪು ಊರ್ಜಿತದಲ್ಲಿರುತ್ತದೆ. ಹೀಗಾಗಿ ಶಬರಿಮಲೆಗೆ ಹೆಣ್ಣುಮಕ್ಕಳ ಪ್ರವೇಶ ಅಬಾಧಿತ.

ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ 10ರಿಂದ 50 ವರ್ಷ ವಯಸ್ಸಿನ ಹೆಣ್ಣುಮಕ್ಕಳು ದೇಗುಲ ಪ್ರವೇಶಿಸದಂತೆ ನಿರ್ಬಂಧಿಸುವುದು ಅಸಾಂವಿಧಾನಿಕ ಎಂದು ಕಳೆದ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. 4:1 ಅನುಪಾತದಲ್ಲಿ ತೀರ್ಪು ಪ್ರಕಟಿಸಿತ್ತು. ಇದನ್ನು ಪ್ರಶ್ನಿಸಿ ದೇವಸ್ಥಾನದ ತಂತ್ರಿ, ನಾಯರ್ ಸೇವಾ ಸಮಾಜ, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಸೇರಿದಂತೆ 56 ಅರ್ಜಿಗಳು ಸಲ್ಲಿಕೆಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.