
ಶಬರಿಮಲೆಯ ಶ್ರೀಕೋವಿಲ್ನಿಂದ ಚಿನ್ನ ಲೇಪಿತ ಕವಚ ಹೊರತೆಗೆದ ಎಸ್ಐಟಿ
ಪತ್ತನಂತಿಟ್ಟ: ಶಬರಿಮಲೆ ದೇವಸ್ಥಾನದಿಂದ ಚಿನ್ನ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಸೋಮವಾರ ಶ್ರೀಕೋವಿಲ್ನಿಂದ (ಗರ್ಭಗುಡಿ) ಚಿನ್ನ ಲೇಪಿತ ಕವಚವನ್ನು ವೈಜ್ಞಾನಿಕ ಪರೀಕ್ಷೆಗಾಗಿ ಹೊರತೆಗೆದಿದೆ.
ಕೇರಳ ಹೈಕೋರ್ಟ್ ಸೂಚನೆಯಂತೆ, ಈ ಪ್ರಕ್ರಿಯೆಯು ‘ದೇವ ಅನುಜ್ಞೆ’ (ದೈವಿಕ ಅನುಮತಿ) ಆಚರಣೆ ಮತ್ತು ಅಗ್ರ ಪೂಜೆ ಬಳಿಕ ದೇವಾಲಯವನ್ನು ಮುಚ್ಚಿದ ನಂತರ ಮಧ್ಯಾಹ್ನ 1.15ಕ್ಕೆ ಪ್ರಾರಂಭವಾಗಿ 3 ಗಂಟೆವರೆಗೆ ನಡೆಯಿತು.
ಇದಕ್ಕಾಗಿ ತನಿಖಾಧಿಕಾರಿ ಡಿವೈಎಸ್ಪಿ ಎಸ್. ಶಶಿಧರನ್ ನೇತೃತ್ವದ ತಂಡವು ಭಾನುವಾರದಿಂದ ಶಬರಿಮಲೆಯಲ್ಲಿ ಬೀಡುಬಿಟ್ಟಿದೆ.
ಪೊಲೀಸ್ ಸಿಬ್ಬಂದಿ, ವಿಧಿವಿಜ್ಞಾನ ತಜ್ಞರು ಮತ್ತು ರಾಸಾಯನಿಕ ವಿಶ್ಲೇಷಕರು ಸೇರಿದಂತೆ 20 ಮಂದಿ ಎಸ್ಐಟಿಯೊಂದಿಗೆ ಸೇರಿಕೊಂಡಿದ್ದಾರೆ. ಇಡೀ ಕಾರ್ಯವಿಧಾನವನ್ನು ವಿಡಿಯೊ ಚಿತ್ರೀಕರಣ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಶಿಲ್ಪಿಗಳು ಪಕ್ಕದ ಕಂಬಗಳಿಂದ ಚಿನ್ನ ಲೇಪಿತ ಕವಚ, ದ್ವಾರಪಾಲಕ ಮೂರ್ತಿಗಳ ಪೀಠಗಳು ಮತ್ತು ಶ್ರೀಕೋವಿಲ್ನ ಬಾಗಿಲಿನ ಚೌಕಟ್ಟುಗಳನ್ನು ತೆಗೆಯಲು ಎಸ್ಐಟಿಗೆ ಸಹಾಯ ಮಾಡಿದರು. ಅವುಗಳನ್ನು ಮತ್ತೊಂದು ಕೋಣೆಗೆ ವರ್ಗಾಯಿಸಲಾಯಿತು. ಅಲ್ಲಿ ಅವುಗಳ ತೂಕವನ್ನು ದಾಖಲಿಸಲಾಯಿತು.
ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಮಾದರಿಗಳನ್ನು ಸಂಗ್ರಹಿಸಲಾಯಿತು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಇವುಗಳನ್ನು ಶೀಘ್ರದಲ್ಲೇ ಮರುಸ್ಥಾಪಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.