
ಮಕರವಿಳಕ್ಕು ಉತ್ಸವಕ್ಕಾಗಿ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿದ್ದರು
–ಪಿಟಿಐ ಚಿತ್ರ
ಶಬರಿಮಲೆ: ಇಲ್ಲಿನ ಅಯ್ಯಪ್ಪ ದೇಗುಲಕ್ಕೆ ವಿವಿಧ ರಾಜ್ಯಗಳಿಂದ ಬಂದಿದ್ದ ಸಾವಿರಾರು ಭಕ್ತರು ಬುಧವಾರ ಸಂಜೆ 6.43ಕ್ಕೆ ಮಕರಜ್ಯೋತಿಯನ್ನು ಕಣ್ತುಂಬಿಕೊಂಡರು.
ಇರುಮುಡಿ ಹೊತ್ತಿದ್ದ ಭಕ್ತರು ದೇವಾಲಯದ ಆವರಣ ಮತ್ತು ಇತರೆಡೆಗಳಲ್ಲಿ ಮಕರಜ್ಯೋತಿ ದರ್ಶನಕ್ಕಾಗಿ ಮಧ್ಯಾಹ್ನದಿಂದಲೇ ಕಾದು ನಿಂತಿದ್ದರು. ದೇಗುಲದಿಂದ 8 ಕಿ.ಮೀ. ದೂರದಲ್ಲಿರುವ ಪೊನ್ನಂಬಲಮೇಡು ಬೆಟ್ಟದ ಕಾಡಿನೊಳಗಿನಿಂದ ಮಕರಜ್ಯೋತಿ ಕಾಣಿಸಿಕೊಂಡಾಗ ಪುಳಕಿತರಾದರು. ಜ್ಯೋತಿಯನ್ನು ವೀಕ್ಷಿಸಲು ಶಬರಿಮಲೆ ಮತ್ತು ಸುತ್ತಮುತ್ತಲಿನ ವಿವಿಧ ವೀಕ್ಷಣಾ ಸ್ಥಳಗಳಲ್ಲಿ ಸಾವಿರಾರು ಭಕ್ತರು ನೆರೆದಿದ್ದರು.
ಪತ್ತನಂತಿಟ್ಟದ ಪಂದಳಂ ಅರಮನೆಯಿಂದ ಮೆರವಣಿಗೆ ಮೂಲಕ ತರಲಾದ ‘ತಿರುವಾಭರಣ’ದಿಂದ (ಪವಿತ್ರ ಆಭರಣಗಳು) ಅಯ್ಯಪ್ಪ ದೇವರ ಮೂರ್ತಿಯನ್ನು ಅಲಂಕರಿಸಲಾಗಿತ್ತು.
ದೇಗುಲ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಕಳೆದ ಎರಡು ತಿಂಗಳಿಂದ ನಡೆದ ವಾರ್ಷಿಕ ಯಾತ್ರೆಯು ಮಕರವಿಳಕ್ಕು ಉತ್ಸವದೊಂದಿಗೆ ಕೊನೆಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.