ADVERTISEMENT

ಅಯ್ಯಪ್ಪ ದೇಗುಲಕ್ಕೆ ಮತ್ತೊಬ್ಬ ಮಹಿಳೆ?

ಶಬರಿಮಲೆ ಪ್ರವೇಶಿಸಿದ ಬಿಂದು, ಕನಕದುರ್ಗಾ ಸಂದರ್ಶನ

ಪಿಟಿಐ
Published 4 ಜನವರಿ 2019, 20:23 IST
Last Updated 4 ಜನವರಿ 2019, 20:23 IST
   

ಶಬರಿಮಲೆ: ಶ್ರೀಲಂಕಾದ 47 ವರ್ಷ ವಯಸ್ಸಿನ ಶಶಿಕಲಾ ಎಂಬವರು ಗುರುವಾರ ರಾತ್ರಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೂ ಮೊದಲು ಇಬ್ಬರು ಮಹಿಳೆಯರು ದೇಗುಲ ಪ್ರವೇಶಿಸಿದ್ದನ್ನು ಪ್ರತಿಭಟಿಸಿ ಕೇರಳದ ಅಲ್ಲಲ್ಲಿ ಶುಕ್ರವಾರವೂ ಹಿಂಸಾಚಾರ ಮುಂದುವರಿದಿದೆ.

ಶಶಿಕಲಾ ಅವರು ದೇಗುಲ ಪ್ರವೇಶಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮತ್ತು ಪೊಲೀಸರು ದೃಢಪಡಿಸಿದ್ದಾರೆ.

ಆದರೆ, ಶಶಿಕಲಾ ಅವರು ದೇಗುಲದ ಒಳ ಹೋಗಿರುವ ಬಗ್ಗೆ ಗೊಂದಲ ಇದೆ. ತಾವು ದೇಗುಲದತ್ತ ಹೋದಾಗ ಭಕ್ತರಿಂದ ಯಾವುದೇ ಪ್ರತಿಭಟನೆ ಎದುರಾಗಲಿಲ್ಲ, ಪೊಲೀಸರೇ ತಮ್ಮನ್ನು ಅಲ್ಲಿಂದ ಹೊರಗಟ್ಟಿದರು ಎಂದು ಶಶಿಕಲಾ ಅವರು ಶುಕ್ರವಾರ ಬೆಳಿಗ್ಗೆ ಹೇಳಿದ್ದಾರೆ. ಶಶಿಕಲಾ ಅವರು ದೇಗುಲ ಪ್ರವೇಶಿರುವ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಗಳನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.

ADVERTISEMENT

ಹದಿನೆಂಟು ಮೆಟ್ಟಿಲುಗಳನ್ನು ಏರಿ ಶಶಿಕಲಾ ಅವರು ದೇಗುಲದೊಳಕ್ಕೆ ಹೋದರೇ ಎಂಬುದು ಸ್ಪಷ್ಟವಾಗಿಲ್ಲ.

ಗಂಡ ಶರವಣ ಮತ್ತು ಮಗನ ಜತೆಗೆ ಅಯ್ಯಪ್ಪ ದರ್ಶನಕ್ಕಾಗಿ ಶಶಿಕಲಾ ಅವರು ಬಂದಿದ್ದರು. ತಾವು ಮತ್ತು ಮಗನಿಗೆ ಮಾತ್ರ ಅಯ್ಯಪ್ಪ ದರ್ಶನ ಪಡೆಯಲು ಸಾಧ್ಯವಾಯಿತು ಎಂದು ಶರವಣ ಅವರು ಹೇಳಿದ್ದಾರೆ.

ಮಹಿಳೆಯೊಬ್ಬರು ಇರುಮುಡಿ ಹೊತ್ತು, ಪೊಲೀಸ್‌ ರಕ್ಷಣೆಯಲ್ಲಿ ದೇಗುಲದತ್ತ ಸಾಗುತ್ತಿರುವ ದೃಶ್ಯಗಳನ್ನು ಮಲಯಾಳದ ಕೆಲವು ಸುದ್ದಿ ವಾಹಿನಿಗಳು ಗುರುವಾರ ರಾತ್ರಿಯೇ ಪ್ರಸಾರ ಮಾಡಿದ್ದವು. ಸುದ್ದಿ ವಾಹಿನಿಗಳ ಕ್ಯಾಮೆರಾಗಳನ್ನು ಕಂಡ ಪೊಲೀಸರು ದೂರಕ್ಕೆ ಓಡುತ್ತಿರುವ ದೃಶ್ಯಗಳೂ ಪ್ರಸಾರ ಆಗಿದ್ದವು.

‘ಭಕ್ತರಿಂದ ಯಾವುದೇ ಪ್ರತಿಭಟನೆ ಇರಲಿಲ್ಲ. ಪೊಲೀಸರೇ ನನ್ನನ್ನು ಹಿಂದಕ್ಕೆ ಕಳುಹಿಸಿದರು. ನಾನೊಬ್ಬ ಅಯ್ಯಪ್ಪ ಭಕ್ತೆ. ಆದರೆ ಅವರು ನನ್ನನ್ನು ಒಳ ಹೋಗಲು ಬಿಡಲಿಲ್ಲ. ನನಗೆ ಯಾರ ಬಗ್ಗೆಯೂ ಹೆದರಿಕೆ ಇಲ್ಲ’ ಎಂದು ಶಶಿಕಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. 41 ದಿನಗಳ ವ್ರತ ಮಾಡಿರುವುದಾಗಿಯೂ ಅವರು ತಿಳಿಸಿದ್ದಾರೆ.

ದೇಗುಲ ಪ್ರವೇಶಿಸಿ ದರ್ಶನ ಪಡೆ ದಿಲ್ಲ ಎಂದು ಶಶಿಕಲಾ ಹೇಳಲು ಸುರಕ್ಷತೆ ಯ ಭಯವೇ ಕಾರಣ ಆಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

ಪ್ರವೇಶಕ್ಕೆ ನಕ್ಸಲ್‌ ಬೆಂಬಲ: ಆರೋಪ

ಶಬರಿಮಲೆ ವಿಚಾರದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲು ಶಬರಿಮಲೆ ಕರ್ಮ ಸಮಿತಿ ಮತ್ತು ಬಿಜೆಪಿ ನಿರ್ಧರಿಸಿವೆ.

ನಕ್ಸಲರ ಬೆಂಬಲದಿಂದ ಇಬ್ಬರು ಮಹಿಳೆಯರು ಶಬರಿಮಲೆ ಪ್ರವೇಶಿಸಿದ್ದಾರೆ ಎಂದು ಆರೋಪಿಸಿ ಈ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ (ಎನ್‌ಐಎ) ತನಿಖೆ ನಡೆಸಬೇಕು ಎಂದು ಕರ್ಮ ಸಮಿತಿ ಒತ್ತಾಯಿಸಿದೆ.

ಬಿಜೆಪಿ ಮುಖಂಡರು ಆರ್‌ಎಸ್‌ಎಸ್‌ ನಾಯಕರನ್ನು ಭೇಟಿಯಾಗಿದ್ದಾರೆ. ಅಯ್ಯಪ್ಪ ಭಕ್ತರ ನಂಬಿಕೆಯನ್ನು ರಕ್ಷಿಸುವುದು ಮತ್ತು ಮುಖ್ಯಮಂತ್ರಿ ಹುದ್ದೆಯಿಂದ ಪಿಣರಾಯಿ ವಿಜಯನ್‌ ಅವರನ್ನು ಪದಚ್ಯುತಗೊಳಿಸಲು ಕರ್ಮ ಸಮಿತಿ ನಡೆಸುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.

ಎಲ್‌ಡಿಎಫ್‌ ಆಳ್ವಿಕೆಯಲ್ಲಿ ಹಿಂದೂ ಧರ್ಮ ಅಪಾಯದಲ್ಲಿದೆ. ಶಬರಿಮಲೆಯ ಪರಂಪರೆಯನ್ನು ರಕ್ಷಿಸುವುದಕ್ಕಾಗಿ ರಾಜ್ಯದಲ್ಲಿ ಇದೇ 11,12 ಮತ್ತು 13ರಂದು ರಥಯಾತ್ರೆ ನಡೆಸಲಾಗುವುದು ಎಂದು ಕರ್ಮ ಸಮಿತಿ ಹೇಳಿದೆ.

***

ಶುದ್ಧೀಕರಣ ವಿಧಿಗಳನ್ನು ನಡೆಸಲು ಕಾರಣವೇನು ಎಂದು ಮುಖ್ಯ ಅರ್ಚಕರಿಂದ ವಿವರಣೆ ಕೇಳಲಾಗುವುದು. ಶುದ್ಧೀಕರಣ ಮಾಡಿರುವುದು ಸುಪ್ರೀಂ ಕೋರ್ಟ್‌ ತೀರ್ಪಿನ ಉಲ್ಲಂಘನೆ

-ಎ. ಪದ್ಮಕುಮಾರ್‌, ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ

ಮುಖ್ಯಮಂತ್ರಿಯವರೇ ರಾಜ್ಯದಲ್ಲಿ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ. ಅವರಿಗೆ ಹುದ್ದೆಯಲ್ಲಿ ಮುಂದುವರಿಯಲು ಯಾವುದೇ ಹಕ್ಕು ಇಲ್ಲ

-ಎಸ್‌.ಜೆ. ಆರ್‌. ಕುಮಾರ್‌, ಶಬರಿಮಲೆ ಕರ್ಮ ಸಮಿತಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.