ADVERTISEMENT

ಮಕರವಿಳಕ್ಕು ಉತ್ಸವ: ಹೊಸ ವರ್ಷದ ಮೊದಲ ದಿನವೇ ಶಬರಿಮಲೆಗೆ ಭಕ್ತರ ದಂಡು

ಪಿಟಿಐ
Published 1 ಜನವರಿ 2024, 8:11 IST
Last Updated 1 ಜನವರಿ 2024, 8:11 IST
<div class="paragraphs"><p>ಶಬರಿಮಲೆಯ ಅಯ್ಯಪ್ಪ ದೇಗುಲ</p></div>

ಶಬರಿಮಲೆಯ ಅಯ್ಯಪ್ಪ ದೇಗುಲ

   

ಶಬರಿಮಲೆ: ಮಕರವಿಳಕ್ಕು ಉತ್ಸವಕ್ಕಾಗಿ ತೆರೆದ ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಹೊಸ ವರ್ಷದ ದಿನದಂದು (ಸೋಮವಾರ) ಭಕ್ತ ಸಾಗರವೇ ಹರಿದು ಬಂದಿದೆ.

ದೇವಾಲಯವನ್ನು ಮುಂಜಾನೆ 3 ಗಂಟೆಗೆ ತೆರೆಯಲಾಯಿತು. ಅಯ್ಯಪ್ಪಸ್ವಾಮಿಗೆ 18,018 ತೆಂಗಿನಕಾಯಿಗಳಿಂದ ತುಪ್ಪದ ಅಭಿಷೇಕ, ಸೇರಿದಂತೆ ಪೂಜೆಯನ್ನು ನೆರವೇರಿಸಲಾಯಿತು ಎಂದು ಅರ್ಚಕರು ತಿಳಿಸಿದ್ದಾರೆ.

ADVERTISEMENT

ಮಕರವಿಳಕ್ಕು ಉತ್ಸವದ ಅಂಗವಾಗಿ ಮುಖ್ಯ ಅರ್ಚಕ ಪಿ.ಎನ್‌.ಮಹೇಶ್‌ ನಂಬೂದಿರಿ ಅವರು ತಂತ್ರಿ ಕಂಡರಾರು ಮಹೇಶ್‌ ಮೋಹನರಾರು ಅವರ ಉಪಸ್ಥಿತಿಯಲ್ಲಿ ಅಯ್ಯಪ್ಪ ಸ್ವಾಮಿ ದೇವಾಲಯದ ಗರ್ಭಗುಡಿಯ ಬಾಗಿಲನ್ನು ಶನಿವಾರ ತೆರೆಯಲಾಯಿತು. ಮಂಡಲ ಪೂಜೆ ಮುಕ್ತಾಯವಾದ ನಂತರ ಡಿಸೆಂಬರ್‌ 27ರಂದು ದೇಗುಲದ ಬಾಗಿಲನ್ನು ಮುಚ್ಚಲಾಗಿತ್ತು.

ಜ.15ರಂದು ನಡೆಯುವ ಮಕರವಿಳಕ್ಕು ಅಂಗವಾಗಿ ‘ಪ್ರಸಾದ ಶುದ್ಧ ಕ್ರಿಯೆ’ ಮತ್ತು ‘ಬಿಂಬ ಶುದ್ಧ ಕ್ರಿಯೆ’ ಮೊದಲಾದ ಧಾರ್ಮಿಕ ವಿಧಿಗಳು ಜನವರಿ 13 ಮತ್ತು 14ರಂದು ನಡೆಯಲಿವೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಹೇಳಿಕೆಯಲ್ಲಿ ತಿಳಿಸಿದೆ.

ಮಕರವಿಳಕ್ಕು ದಿನದಂದು ‘ತಿರುವಾಭರಣ’ ಸ್ವೀಕಾರ, ದೀಪಾರಾಧನೆಗೆ ಸಾವಿರಾರು ಮಂದಿ ಭಕ್ತರು ಸಾಕ್ಷಿಯಾಗಲಿದ್ದಾರೆ ಎಂದಿದೆ.

ಮಕರವಿಳಕ್ಕು ದರ್ಶನದ ಬಳಿಕವೂ ಜನವರಿ 20ರ ವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.