ನವದೆಹಲಿ: ತ್ರಿವಳಿ ತಲಾಖ್ ಅನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದಾಗ ಸ್ವಾಗತಿಸಿದವರು ಈಗ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶವನ್ನು ನಿರಾಕರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಸುಪ್ರೀಂ ಕೋರ್ಟ್ ಒಂದು ನಿರ್ಧಾರ ಪ್ರಕಟಿಸಿದೆ. ಆದರೆ ನೀವೀಗ ಅದು ನಮ್ಮ ಸಂಪ್ರದಾಯ ಎನ್ನುತ್ತೀರಿ. ಹಾಗೆ ನೋಡಿದರೆ ತ್ರಿವಳಿ ತಲಾಖ್ ಸಹ ಸಂಪ್ರದಾಯವೇ, ಅದನ್ನು ನಿಷೇಧಿಸಿದಾಗ ಎಲ್ಲರೂ ಶ್ಲಾಘಿಸಿದರು. ಅದೇ ಹಿಂದೂಗಳು ಈಗ ಬೀದಿಗಿಳಿದಿದ್ದಾರೆ’ ಎಂದು ಸ್ವಾಮಿ ಹೇಳಿದ್ದಾರೆ.
ಶಬರಿಮಲೆಗೆ ಮಹಿಳಾ ಪ್ರವೇಶಕ್ಕೆ ಬೆದರಿಕೆಯೊಡ್ಡಿ ಹಿಂದೂ ಸಂಘಟನೆಗಳು ಬೆದರಿಕೆಯೊಡ್ಡಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಇದು ಹಿಂದೂ ನವೋದಯ ಮತ್ತು ಗೊಡ್ಡು ಸಂಪ್ರದಾಯದ ನಡುವಣ ಹೋರಾಟ. ಎಲ್ಲ ಹಿಂದೂಗಳೂ ಸಮಾನರು, ಜಾತಿ ವ್ಯವಸ್ಥೆ ತೊಲಗಬೇಕು ಎಂದು ನವೋದಯ ಹೇಳುತ್ತದೆ. ಯಾಕೆಂದರೆ ಇಂದು ಬ್ರಾಹ್ಮಣರು ಮಾತ್ರ ಬುದ್ಧಿವಂತರಲ್ಲ, ಅವರು ಸಿನಿಮಾ, ವ್ಯಾಪರ ಕ್ಷೇತ್ರದಲ್ಲೂ ಇದ್ದಾರೆ. ಹುಟ್ಟಿನ ವೇಳೆ ಜಾತಿ ಎಲ್ಲಿ ಬರೆದಿರುತ್ತದೆ? ಶಾಸ್ತ್ರಗಳನ್ನು ತಿದ್ದುಪಡಿ ಮಾಡಬಹುದು’ ಎಂದು ಸ್ವಾಮಿ ಹೇಳಿರುವುದನ್ನು ಎಎನ್ಐ ಟ್ವೀಟ್ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.