ADVERTISEMENT

ಶಬರಿಮಲೆ: ಮಹಿಳೆಯರಿಗಾಗಿ ಪ್ರತ್ಯೇಕ ಸೌಕರ್ಯ ಭರವಸೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2018, 15:17 IST
Last Updated 7 ಅಕ್ಟೋಬರ್ 2018, 15:17 IST
   

ತಿರುವನಂತಪುರಂ: ಶಬರಿಮಲೆಯಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಸೌಕರ್ಯ ಒದಗಿಸಲಾಗುವುದು ಎಂದು ದೇವಸ್ವಂ ಕಮಿಷನರ್ ಎನ್. ವಾಸು ಹೇಳಿದ್ದಾರೆ.ಪಂಪಾಮತ್ತು ಅದರ ಸುತ್ತಲಿನ ಪ್ರದೇಶಗಳಲ್ಲಿ ಈಗಿರುವ ಶೌಚಾಲಯಗಳಲ್ಲಿ ಕೆಲವನ್ನು ಮಹಿಳೆಯರಿಗೆ ಮಾತ್ರ ನೀಡಲಾಗುವುದು.ಮಹಿಳೆಯರಿಗಾಗಿರುವ ಶೌಚಾಲಯಗಳಿಗೆ ಗುಲಾಬಿ ಬಣ್ಣ ಬಳಿಯಲಾಗುವುದು.ಇದಕ್ಕೆ ಬೇಕಾಗಿರುವ ಕೆಲಸ ಕಾರ್ಯಗಳನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಸು ಅವರು, ಪಂಪಾ ಮತ್ತು ಸನ್ನಿಧಾನದಲ್ಲಿ ಹೆಚ್ಚಿನ ವಿದ್ಯುದ್ದೀಪಗಳ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.ಪಂಪಾ ನದಿಯಲ್ಲಿ ಮಹಿಳೆಯರಿಗೆ ಸ್ನಾನ ಮಾಡಲು ಮತ್ತು ಬಟ್ಟೆ ಬದಲಿಸಲು ಪ್ರತ್ಯೇಕ ಸೌಕರ್ಯ ಒದಗಿಸಲಾಗುವುದು.ಹದಿನೆಂಟು ಮೆಟ್ಟಿಲು (ಪದಿನೆಟ್ಟಾಂಪಡಿ) ಹತ್ತುವ ವಿಷಯದ ಬಗ್ಗೆ ಪೊಲೀಸರೊಂದಿಗೆ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು.ಸೋಮವಾರ ರಾಜ್ಯ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಚರ್ಚೆ ನಡೆಸಿದ ನಂತರವೇ ಈ ಬಗ್ಗೆ ತೀರ್ಮಾನಿಸಲಾಗುವುದು. ಈ ವಿಷಯದ ಬಗ್ಗೆ ದೇವಸ್ವಂ ಮಂಡಳಿಗೆ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಅಂದಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪನ್ನು ಪಾಲಿಸಿ ಮಹಿಳೆಯರು ಶಬರಿಮಲೆಗೆ ಬಂದರೆ ಅವರನ್ನು ತಡೆಯಲಾಗುವುದಿಲ್ಲ. ಸುಪ್ರೀಂ ಕೋರ್ಟ್ ಹೇಳಿದ್ದನ್ನು ನಾವು ಪಾಲಿಸಬೇಕಿದೆ ಎಂದು ದೇವಸ್ವಂ ಕಮಿಷನರ್ ಹೇಳಿದ್ದಾರೆ.

ಗುಡಿಸಲು ನಿರ್ಮಿಸಿ ಪ್ರತಿಭಟನೆ
ಪತ್ತನಂತಿಟ್ಟ: ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಖಂಡಿಸಿ ನಿಲಯ್ಕಲ್ ಎಂಬಲ್ಲಿ ಜನರು ಗುಡಿಸಲುಗಳನ್ನು ನಿರ್ಮಿಸಿ ಪ್ರತಿಭಟನೆ ಆರಂಭಿಸಿದ್ದಾರೆ.ಶಬರಿಮಲೆ ನಂಬಿಕೆಗಳ ಸಂರಕ್ಷಣಾ ಸಮಿತಿ ಈ ಪ್ರತಿಭಟನೆಗೆ ನೇತೃತ್ವ ನೀಡಿದೆ.
ಶಬರಿಮಲೆ ನಂಬಿಕೆಗಳನ್ನು ತಿರಸ್ಕರಿಸಿ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವ ಈ ನಡೆ ಅಯ್ಯಪ್ಪ ಭಕ್ತರ ಭಾವನೆಗಳಿಗೆ ನೋವುಂಟು ಮಾಡಿದೆ. ಕೇರಳದ ಜನರು ಪ್ರತಿಭಟನೆ ಮಾಡುತ್ತಿದ್ದರೂ ಕೇರಳ ಸರ್ಕಾರ ಭಕ್ತರ ಪರವಾಗಿ ನಿಂತಿಲ್ಲ ಎಂದು ಮುಷ್ಕರ ಸಮಿತಿ ಮಾತೃಭೂಮಿ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ, ಇಲ್ಲಿನ ನಂಬಿಕೆಗಳನ್ನು ಉಲ್ಲಂಘಿಸಿ ದೇವಾಲಯಕ್ಕೆ ಬರುವ ಮಹಿಳೆಯರಿಗೆ ಇಲ್ಲಿನ ನಂಬಿಕೆಗಳ ಬಗ್ಗೆ ಮನವರಿಕೆ ಮಾಡುವುದಾಗಿ ಮುಷ್ಕರ ನಿರತರು ಹೇಳಿದ್ದಾರೆ.

ಇದನ್ನೂ ಓದಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.