ADVERTISEMENT

ಶಬರಿಮಲೆ ವಿವಾದ: ಕೇರಳ ವಿಧಾನಸೌಧದ ಮುಂದೆ ಪ್ರತಿಭಟನೆಗೆ ಬಿಜೆಪಿ ಸಜ್ಜು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 4:01 IST
Last Updated 3 ಡಿಸೆಂಬರ್ 2018, 4:01 IST
   

ತಿರುವನಂತಪುರಂ: ಶಬರಿಮಲೆ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶಿಸುವುದನ್ನು ವಿರೋಧಿಸಿ ಬಿಜೆಪಿ ಇಂದು ಕೇರಳದ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಲಿದೆ.ಬೆಳಗ್ಗೆ 10 ಗಂಟೆಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಎನ್ ರಾಧಾಕೃಷ್ಣನ್ ಅವರು ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭಿಸಲಿದ್ದಾರೆ,ಈ ಸತ್ಯಾಗ್ರಹವನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸರೋಜ್ ಪಾಂಡೆ ಉದ್ಘಾಟಿಸಲಿದ್ದಾರೆ.

ಶಬರಿಮಲೆಯಲ್ಲಿ ಈಗಿರುವ ಎಲ್ಲ ನಿರ್ಬಂಧಗಳನ್ನು ತೆಗೆದುಹಾಕಬೇಕು,ಕೆ. ಸುರೇಂದ್ರನ್ ವಿರುದ್ಧವಿರುವ ಸುಳ್ಳು ಕೇಸುಗಳನ್ನು ವಾಪಸ್ ತೆಗೆದುಕೊಳ್ಳಬೇಕು, ಅಯ್ಯಪ್ಪ ಭಕ್ತರಿಗೆ ಸೌಕರ್ಯಗಳನ್ನು ನೀಡಬೇಕು, ಮುಷ್ಕರ ನಿರತರ ವಿರುದ್ಧ ಸುಳ್ಳು ಕೇಸು ದಾಖಲಿಸಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಒತ್ತಾಯಿಸಿದೆ.ಕೇರಳ ಸರ್ಕಾರ15 ದಿನಗಳೊಳಗೆ ಈ ಒತ್ತಾಯಕ್ಕೆ ಸ್ಪಂದಿಸದೇ ಇದ್ದರೆ ಮುಷ್ಕರವನ್ನು ಮತ್ತಷ್ಟು ತೀವ್ರವಾಗಿಸುವುದಾಗಿ ಕೋರ್ ಕಮಿಟಿ ಹೇಳಿದೆ.

ಶಬರಿಮಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಂತಾಗಿದೆ ಎಂದು ಕೇಂದ್ರದಿಂದ ಕೇರಳಕ್ಕೆ ಭೇಟಿ ನೀಡಿದ ಸದಸ್ಯರ ತಂಡ ಆರೋಪಿಸಿತ್ತು.ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸರೋಜ್ ಪಾಂಡೆ, ಪ್ರಹ್ಲಾದ್ ಜೋಷಿ, ವಿನೋದ್ ಶಂಕರ್, ನಳಿನ್ ಕುಮಾರ್ ಕಟೀಲ್ ಮೊದಲಾದವರು ಈ ತಂಡದಲ್ಲಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.