ನವದೆಹಲಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಕುಟುಂಬ ಸಮೇತ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದರು. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ವಿಶೇಷ ವಿಡಿಯೊ ಮೂಲಕ ಸಚಿನ್ ಅನುಭವ ಹಂಚಿಕೊಂಡಿದ್ದಾರೆ.
ಜಮ್ಮು ಕಾಶ್ಮೀರದ ಭೇಟಿಯ ಅನುಭವ ಸದಾಕಾಲ ನನ್ನ ನೆನಪಿನಲ್ಲಿ ಉಳಿಯಲಿದೆ. ಸುತ್ತಲೂ ಹಿಮದಿಂದ ಆವೃತವಾದ ತಣ್ಣನೆಯ ವಾತಾವರಣವಿದ್ದರೂ ಅಲ್ಲಿಯ ಜನರ ಆತಿಥ್ಯ ಬೆಚ್ಚನೆಯ ಅನುಭವ ನೀಡಿತ್ತು ಎಂದು ಬರೆದುಕೊಂಡಿದ್ದಾರೆ.
ಪೋಸ್ಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಉಲ್ಲೇಖಿಸಿ ಶ್ಲಾಘಿಸಿದ ಸಚಿನ್, ಮೋದಿಯವರು ನಮ್ಮ ದೇಶದಲ್ಲಿ ನೋಡುವುದು ಬಹಳಷ್ಟಿದೆ ಎಂದಿದ್ದರು. ಈ ಪ್ರವಾಸದ ನಂತರ ಅದನ್ನು ಒಪ್ಪಿಕೊಳ್ಳದೇ ಇರಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಮೇಕ್ ಇನ್ ಇಂಡಿಯಾ– ಮೇಕ್ ಫಾರ್ ದಿ ವರ್ಲ್ಡ್ ಎಂಬುದಕ್ಕೆ ಕಾಶ್ಮೀರ ಕ್ರಿಕೆಟ್ ಬ್ಯಾಟ್ಗಳು ಉತ್ತಮ ಉದಾಹರಣೆಗಳಾಗಿವೆ. ಬ್ಯಾಟ್ಗಳು ಜಗತ್ತಿನ ವಿವಿಧ ಪ್ರದೇಶಗಳನ್ನು ತಲುಪಿವೆ. ಈಗ ನಾನು ಜಗತ್ತಿನ ಮತ್ತು ಭಾರತದ ಜನತೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಬಂದು ಇಲ್ಲಿನ ಸೌಂದರ್ಯವನ್ನು ಅನುಭವಿಸಿ ಎಂದು ಕೇಳಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಮೋದಿ ಪ್ರತಿಕ್ರಿಯೆ
ಸಚಿನ್ ತೆಂಡೂಲ್ಕರ್ ಅವರ ಜಮ್ಮು ಕಾಶ್ಮೀರದ ಅನುಭವದ ಪೋಸ್ಟ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ‘ಸಚಿನ್ ಅವರು ಜಮ್ಮುವಿಗೆ ಭೇಟಿ ನೀಡಿರುವುದನ್ನು ನೋಡಿ ಖುಷಿಯಾಗಿದೆ. ಯುವ ಜನರಿಗೆ ಇದು ಎರಡು ಪ್ರಮುಖ ಸಂದೇಶವನ್ನು ತಿಳಿಸುತ್ತದೆ. ಮೊದಲನೆಯದು, ದೇಶದ ವಿವಿಧ ಪ್ರದೇಶಗಳ ಅನ್ವೇಷಣೆ ಮಾಡುವುದು ಮತ್ತು ಎರಡನೇಯದು ಮೇಕ್ ಇನ್ ಇಂಡಿಯಾದ ಮಹತ್ವವನ್ನು ಅರಿಯುವುದು. ಒಟ್ಟಾಗಿ ವಿಕಸಿತ ಮತ್ತು ಆತ್ಮನಿರ್ಭರ್ ಭಾರತವನ್ನು ರಚಿಸೋಣ’ ಎಂದು ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.