ಮುಂಬೈ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ನೀಡಿದ್ದ ಭದ್ರತೆಯನ್ನು ತಗ್ಗಿಸಿ, ಶಿವಸೇನಾ ಶಾಸಕ ಆದಿತ್ಯ ಠಾಕ್ರೆಯ ಭದ್ರತೆಯನ್ನು‘ಜೆಡ್’ ಹಂತಕ್ಕೆ ಹೆಚ್ಚಿಸಲಾಗಿದೆ.
ಮಹಾರಾಷ್ಟ್ರದ ಬೆದರಿಕೆ ಗ್ರಹಿಕೆ ಸಮಿತಿಯ ವರದಿಯ ಅನ್ವಯ ಈ ಬದಲಾವಣೆಗಳನ್ನು ಮಾಡಲಾಗಿದೆ. ನಲವತ್ತಕ್ಕೂ ಹೆಚ್ಚು ಮಂದಿ ವಿಐಪಿಗಳಿಗೆ ಭದ್ರತೆ ಹಿಂಪಡೆಯಲಾಗಿದೆ. ಕೆಲವರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಇನ್ನು ಕೆಲವರಿಗೆ ಹೊಸದಾಗಿ ಭದ್ರತೆ ನೀಡಲಾಗಿದೆ.
‘ಇಲ್ಲಿಯವರೆಗೆ ಸಚಿನ್ ತೆಂಡೂಲ್ಕರ್ ಅವರಿಗೆ ‘ಎಕ್ಸ್’ಭದ್ರತೆಯನ್ನು ಒದಗಿಸಲಾಗಿತ್ತು. ಇದರಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ಅವರಿಗೆ ಕಾವಲಿಗೆ ನೀಡಲಾಗಿತ್ತು. ಈಗ ಅದನ್ನು ಹಿಂಪಡೆಯಲಾಗಿದೆ. ಆದರೆ ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆ ಮುಂದುವರಿಯಲಿದೆ.‘ವೈ+’ಭದ್ರತೆಯಲ್ಲಿದ್ದ ಶಾಸಕ ಆದಿತ್ಯ ಠಾಕ್ರೆ ಅವರಿಗೆ ಇನ್ನು ಮುಂದೆ ‘ಜೆಡ್‘ ಭದ್ರತೆ ದೊರೆಲಿದೆ’ಎಂದು ಎಂದು ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದರು.
ಉತ್ತರ ಪ್ರದೇಶ ಮಾಜಿ ರಾಜ್ಯಪಾಲ ರಾಮ ನಾಯಕ್ ಅವರಿಗೆ ನೀಡಲಾಗಿದ್ದ ಜೆಡ್ ಪ್ಲಸ್ ಭದ್ರತೆ ಹಿಂಪಡೆದು ‘ಎಕ್ಸ್’ಹಂತದ ಭದ್ರತೆ ನೀಡಲಾಗಿದೆ. ಉಗ್ರ ಅಜ್ಮಲ್ ಕಸಬ್ ವಿರುದ್ಧ ವಾದ ಮಂಡಿಸಿದ ಹಿರಿಯವಕೀಲ ಉಜ್ವಲ್ನಿಕ್ಕಂಅವರಿಗೆ ನೀಡಲಾಗಿದ್ದ ಜೆಡ್ + ದರ್ಜೆಯಭದ್ರತೆ ಕಡಿತಗೊಳಿಸಿ ‘ವೈ’ಹಂತದ ಭದ್ರತೆ ನೀಡಲಾಗಿದೆ.
ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರಿಗೆ ‘ವೈ+’ಹಂತದ ಭದ್ರತೆಯಿಂದ‘ಜೆಡ್’ದರ್ಜೆಗೆ ಏರಿಸಲಾಗಿದೆ.ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಅವರಿಗೆ ‘ಜೆಡ್+’ ಭದ್ರತೆ ಮುಂದುವರಿಸಿದೆ. ಇವರ ಸೋದರ ಸಂಬಂಧಿ ಅಜಿತ್ ಪವಾರ್ ಅವರಿಗಿದ್ದ ಜೆಡ್ ಭದ್ರತೆಯೂ ಹಾಗೆಯೇ ಇರಲಿದೆ.
‘ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ಮತ್ತು ಇತರ ಇಲಾಖೆಗಳ ಮಾಹಿತಿ ಆಧರಿಸಿ ಸೂಕ್ಷ್ಮ ವರದಿ ತಯಾರಿಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ’ಎಂದು ಅಧಿಕಾರಿಗಳು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.