ADVERTISEMENT

ಹಿಂದೂ ದಂಪತಿ 4 ಮಕ್ಕಳಿಗೆ ಜನ್ಮ ನೀಡಲಿ: ಸಾಧ್ವಿ ರಿತಂಬರ

ಪಿಟಿಐ
Published 18 ಏಪ್ರಿಲ್ 2022, 16:12 IST
Last Updated 18 ಏಪ್ರಿಲ್ 2022, 16:12 IST
ಸಾಧ್ವಿ ರಿತಂಬರಾ
ಸಾಧ್ವಿ ರಿತಂಬರಾ   

ಕಾನ್ಪುರ/ಲಖನೌ: ‘ಪ್ರತಿ ಹಿಂದೂ ದಂಪತಿ ನಾಲ್ಕು ಮಕ್ಕಳನ್ನು ಹೆತ್ತು, ಅವರಲ್ಲಿ ಇಬ್ಬರನ್ನು ದೇಶಕ್ಕೆ ಅರ್ಪಿಸಬೇಕು’ ಎಂದು ಒತ್ತಾಯಿಸಿರುವ ಹಿಂದುತ್ವದ ಪ್ರತಿಪಾದಕಿ ಸಾಧ್ವಿ ರಿತಂಬರ ‘ಭಾರತವು ಶೀಘ್ರದಲ್ಲೇ ‘ಹಿಂದೂ ರಾಷ್ಟ್ರ’ ಆಗಲಿದೆ’ ಎಂದು ಹೇಳಿದ್ದಾರೆ.

ದೆಹಲಿಯ ಜಹಾಂಗಿರ್‌ಪುರಿಯಲ್ಲಿ ಶನಿವಾರ ನಡೆದ ಕೋಮು ಹಿಂಸಾಚಾರವನ್ನು ಉಲ್ಲೇಖಿಸಿದ ಅವರು, ‘ಹನುಮ ಜಯಂತಿಯ ಶೋಭಾ ಯಾತ್ರೆಯ (ಮೆರವಣಿಗೆ) ಮೇಲೆ ದಾಳಿ ಮಾಡಿದವರು ದೇಶವು ಸಾಧಿಸಿದ ಪ್ರಗತಿಯ ಬಗ್ಗೆ ಅಸೂಯೆ ಹೊಂದಿದ್ದಾರೆ’ ಎಂದೂ ಹೇಳಿದ್ದಾರೆ.

ನಿರಾಲಾ ನಗರದಲ್ಲಿ ರಾಮ ಮಹೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಹಿಂದೂ ಮಹಿಳೆಯರು ‘ನಾವಿಬ್ಬರು ನಮಗಿಬ್ಬರು’ (ಹಮ್ ದೋ, ಹಮಾರೆ ದೋ) ಎನ್ನುವ ತತ್ವವನ್ನು ಅನುಸರಿಸುತ್ತಿದ್ದಾರೆ. ಆದರೆ, ನಾನು ವಿನಂತಿಸಿಕೊಳ್ಳುವುದೇನೆಂದರೆ, ಎಲ್ಲ ಹಿಂದೂ ದಂಪತಿ ನಾಲ್ವರು ಮಕ್ಕಳನ್ನು ಹೆತ್ತು, ಅವರಲ್ಲಿ ಇಬ್ಬರನ್ನು ದೇಶಕ್ಕೆ ಅರ್ಪಿಸಬೇಕು. ಉಳಿದ ಇಬ್ಬರನ್ನು ಕುಟುಂಬಕ್ಕೆ ಮೀಸಲಿಡಬೇಕು’ ಎಂದರು.

ADVERTISEMENT

‘ಜನಸಂಖ್ಯೆಯ ಅಸಮತೋಲನವಾಗದಂತೆ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕು. ಜನಸಂಖ್ಯಾ ಅಸಮತೋಲನ ಉಂಟಾದರೆ ದೇಶದ ಭವಿಷ್ಯ ಚೆನ್ನಾಗಿರುವುದಿಲ್ಲ’ ಎಂದು ಅವರು ಸೋಮವಾರ ಪಿಟಿಐಗೆ ತಿಳಿಸಿದ್ದಾರೆ.

ತಮ್ಮ ಮಕ್ಕಳನ್ನು ಆರ್‌ಎಸ್‌ಎಸ್‌ಗೆ ಅರ್ಪಿಸುವಂತೆ ಪೋಷಕರನ್ನು ಒತ್ತಾಯಿಸುತ್ತೀರಾ ಎನ್ನುವ ಪ್ರಶ್ನೆಗೆ, ‘ಹೌದು. ಅವರನ್ನು ಆರ್‌ಎಸ್‌ಎಸ್‌ಗೆ ಅರ್ಪಿಸುವಂತೆ ನಾನು ಕೇಳಿದ್ದೇನೆ. ಅವರನ್ನು ವಿಎಚ್‌ಪಿ ಕಾರ್ಯಕರ್ತರನ್ನಾಗಿ ಮಾಡಿ ಮತ್ತು ರಾಷ್ಟ್ರಕ್ಕೆ ಸಮರ್ಪಿಸಬೇಕು’ ಎಂದೂ ಸಾಧ್ವಿ ರಿತಂಬರ ಅವರು ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.