ನವದೆಹಲಿ:‘ಕೆರೆಗಳು ಮತ್ತು ಜೌಗು ಪ್ರದೇಶಗಳಿಂದ ಹೂಳೆತ್ತುವ ಮತ್ತು ನಿರ್ವಹಣೆಯ ನೆಪದಲ್ಲಿ ಮರಳು ಗಣಿಕಾರಿಕೆಯನ್ನು ನಡೆಸುವುದನ್ನು ನಿಷೇಧಿಸಲಾಗಿದೆ’ ಎಂದು ಪರಿಸರ ಮತ್ತು ಅರಣ್ಯ ಸಚಿವಾಲಯವು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಸೂಚಿಸಿದೆ.
‘ಜೌಗು ಪ್ರದೇಶಗಳ ಸವಕಳಿ ಮತ್ತು ನಾಶವು ಬಹಳ ಗಂಭೀರ ಸಮಸ್ಯೆಯಾಗಿದೆ. ಒಳಚರಂಡಿ, ಕಸ ವಿಲೇವಾರಿ, ಮಾಲಿನ್ಯ(ಕೈಗಾರಿಕಾ ತ್ಯಾಜ್ಯಗಳ ವಿಸರ್ಜನೆ, ಘನ ತ್ಯಾಜ್ಯಗಳ ವಿಲೇವಾರಿ), ಜಲ ವಿಜ್ಞಾನದ ಬದಲಾವಣೆ, ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಶೋಷಣೆ ಮತ್ತು ಕಾನೂನುಬಾಹಿರ ನಿರ್ಮಾಣಗಳಿಂದ ಜೀವವೈವಿಧ್ಯತೆಗೆ ಧಕ್ಕೆ ಉಂಟಾಗುತ್ತಿದೆ’ ಎಂದು ಸಚಿವಾಲಯವು ಹೇಳಿದೆ.
ರಾಜ್ಯದ ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳ ಕೆರೆಗಳಿಂದ ಹೂಳೆತ್ತುವಿಕೆ ಮತ್ತು ನಿರ್ವಹಣೆ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಎನ್ಜಿಟಿಯ ಪ್ರಧಾನ ಪೀಠವು ನಡೆಸಿತು.
‘ಈ ಎರಡು ಜಿಲ್ಲೆಗಳ ಅಧಿಕಾರಿಗಳು ಕೆರೆಗಳಿಂದ ಹೂಳೆತ್ತಲು ಅವಕಾಶ ನೀಡುವಾಗ ಸುಸ್ಥಿರ ಗಣಿಕಾರಿಕೆಯ ನಿಯಮಗಳನ್ನು ಅನುಸರಿಸಲಿಲ್ಲ’ ಎಂದು ಅರ್ಜಿಯಲ್ಲಿ ದೂರಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.