ಮುಂಬೈ: ಆಪರೇಷನ್ ಸಿಂಧೂರ ಮತ್ತು ಭಯೋತ್ಪಾದನೆ ಹೆಸರಿನಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 'ಟೂರ್ಸ್ ಆ್ಯಂಡ್ ಟ್ರಾವೆಲ್ಸ್’ ಕಂಪನಿ ತೆರೆಯಲು ಹೊರಟಿದೆ ಎಂದು ಶಿವಸೇನಾ(ಯುಬಿಟಿ) ರಾಜ್ಯಸಭಾ ಸದಸ್ಯಸಂಜಯ್ ರಾವುತ್ ಹೇಳಿದ್ದಾರೆ.
ಉಗ್ರವಾದ ಕುರಿತ ಭಾರತದ ನಿಲುವನ್ನು ವಿವರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ವಿವಿಧ ದೇಶಗಳಿಗೆ ನಿಯೋಗಗಳನ್ನು ಕಳುಹಿಸುತ್ತಿರುವುದರ ಕುರಿತು ಸುದ್ದಿಗಾರರಿಗೆ ರಾವುತ್ ಪ್ರತಿಕ್ರಿಯಿಸಿದ್ದಾರೆ.
‘ವಿಶೇಷ ಅಧಿವೇಶನ ಕರೆದು ಕಾಶ್ಮೀರದ ಸಮಸ್ಯೆಯನ್ನು ಚರ್ಚಿಸುವುದರ ಬದಲು ಈ ಸಮಸ್ಯೆಯನ್ನು ಅಂತರರಾಷ್ಟ್ರೀಯಗೊಳಿಸಲು ಬಿಜೆಪಿ ಬಯಸುತ್ತಿದೆ. ವಿಶೇಷ ಅಧಿವೇಶನದ ನಂತರ ನಿಯೋಗಗಳನ್ನು ಕಳುಹಿಸಬಹುದಾಗಿತ್ತು’ ಎಂದು ಅಭಿಪ್ರಾಯಪಟ್ಟರು.
‘ಲೋಕಸಭೆಯಲ್ಲಿ ನಮ್ಮ ಪಕ್ಷದ 9 ಸಂಸದರಿದ್ದಾರೆ. ಈ ವಿಚಾರವಾಗಿ ಅವರಲ್ಲಿ ಯಾರನ್ನೂ ಸಂಪರ್ಕಿಸಿಲ್ಲ. ಯಾವುದೇ ಪತ್ರವನ್ನು ಕಳುಹಿಸಿಲ್ಲ. ಟಿಎಂಸಿ, ಸಮಾಜವಾದಿ ಮತ್ತು ಆರ್ಜೆಡಿ ಪಕ್ಷದ ಯಾವೊಬ್ಬ ಸಂಸದನು ನಿಯೋಗದಲ್ಲಿ ಇಲ್ಲ. ಬಿಜೆಪಿ ಇದರಲ್ಲೂ ರಾಜಕೀಯ ಮಾಡುತ್ತಿದೆ. ಪ್ರತಿಪಕ್ಷಗಳ ಬೆಂಬಲವನ್ನು ಬಯಸುವ ಅದು ಪ್ರತಿಪಕ್ಷಗಳ ನಡುವೆಯೇ ಒಡಕು ಮೂಡಿಸುತ್ತಿದೆ’ ಎಂದು ಆರೋಪಿಸಿದರು.
‘ಸಂಸದರು ವಿದೇಶಕ್ಕೆ ಹೋಗಿ ಏನು ಮಾಡುತ್ತಾರೆ? ಅವರು ಈ ವಿಷಯವನ್ನು ಅಂತರರಾಷ್ಟ್ರೀಯಗೊಳಿಸಲು ಬಯಸುತ್ತಾರೆಯೇ?... ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತ್ಯಾನಾಹು ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ವಿದೇಶಗಳಿಗೆ ನಿಯೋಗಗಳನ್ನು ಕಳುಹಿಸಿದ್ದಾರೆಯೇ? ಎಂದು ಕೇಳಿದರು.
‘ಕಳೆದ 11 ವರ್ಷಗಳಲ್ಲಿ ಮೋದಿ ಕೈಗೊಂಡಿದ್ದ ಅಂತರರಾಷ್ಟ್ರೀಯ ಪ್ರವಾಸಗಳು ಫಲಿತಾಂಶಗಳನ್ನು ನೀಡಿಲ್ಲ ಎಂದು ತೋರುತ್ತದೆ. ಅದಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿರಬೇಕು’ ಎಂದು ಲೇವಡಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.