ADVERTISEMENT

ನೆಹರೂಗೆ ಅವಮಾನ ಮಾಡಲು ಪಟೇಲ್ ಪ್ರತಿಮೆ ನಿರ್ಮಾಣ ಮಾಡಿಲ್ಲ: ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 9:07 IST
Last Updated 18 ಏಪ್ರಿಲ್ 2019, 9:07 IST
   

ಅಮ್ರೇಲಿ: ಪಂಡಿತ್ ಜವಾಹರ್ ಲಾಲ್ ನೆಹರೂ ಅವರಿಗೆ ಅವಮಾನ ಮಾಡುವ ಉದ್ದೇಶದಿಂದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಏಕತಾ ಪ್ರತಿಮೆ ನಿರ್ಮಾಣ ಮಾಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಪಟೇಲ್ ಅವರು ನೆಹರೂ ನೇತೃತ್ವದ ಸಚಿವ ಸಂಪುಟದಲ್ಲಿ ಉಪ ಪ್ರಧಾನಿಯಾಗಿದ್ದರು.

ಗುಜರಾತಿನ ಅಮ್ರೇಲಿಯಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ,ಜಗತ್ತಿನಲ್ಲಿ ಅತೀ ಎತ್ತರರ ಪ್ರತಿಮೆ ಯಾವುದು? ಅದು ಎಲ್ಲಿದೆ ಎಂದು ನೀವು ಗೂಗಲಿಸಿ ನೋಡಿದ್ದೀರಾ? ಎಂದು ಸಭಿಕರಿಗೆಕೇಳಿದ್ದಾರೆ. ಜಗತ್ತಿನ ಅತೀ ಎತ್ತರದ ಪ್ರತಿಮೆ ಗುಜರಾತಿನಲ್ಲಿದೆ. ಇದು ಗುಜರಾತಿನ ಹೆಮ್ಮೆ ಎಂದಿದ್ದಾರೆ ಮೋದಿ.

ಕಾಂಗ್ರೆಸ್ ಪಕ್ಷ ಕುಟುಂಬ ರಾಜಕಾರಣವನ್ನು ಪೋಷಿಸುತ್ತಿದ್ದು, ಸರ್ದಾರ್ ಪಟೇಲ್ ಅವರನ್ನು ಕಡೆಗಣಿಸಿ ನೆಹರೂ- ಗಾಂಧಿ ಕುಟುಂಬದವರನ್ನು ಹೊಗಳುತ್ತಿದ್ದಾರೆ ಎಂದು ಮೋದಿ ಆ ಹಿಂದೆ ಆರೋಪಿಸಿದ್ದರು.

ADVERTISEMENT

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪಟೇಲ್ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ್ದ ಮೋದಿ, ಪಟೇಲ್ ಅವರು ದೇಶದ ಮೊದಲ ಪ್ರಧಾನಿ ಆಗದೇ ಇದ್ದುದರ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ಮರುಗುವಂತಾಗಿದೆ. ಪಟೇಲ್ ಅವರು ದೇಶದ ಮೊದಲ ಪ್ರಧಾನಿಯಾಗಬೇಕಿತ್ತು. ಅವರು ಪ್ರಧಾನಿಯಾಗಿರುತ್ತಿದ್ದರೆ ದೇಶದ ಸ್ಥಿತಿಯೇ ಬದಲಾಗುತ್ತಿತ್ತು ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.