ಚೆನ್ನೈ: ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆಯ ಮಾಜಿ ನಾಯಕಿ ವಿ.ಕೆ. ಶಶಿಕಲಾ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ.
ನ್ಯಾಯಾಲಯವು ಶಶಿಕಲಾ ಅವರಿಗೆ 2014ರಲ್ಲಿ ವಿಧಿಸಿದ್ದ ₹10 ಕೋಟಿ ಹತ್ತು ಸಾವಿರ ದಂಡವನ್ನು ಬುಧವಾರ ಅವರ ಸಂಬಂಧಿಕರು ನಾಲ್ಕು ಡಿ.ಡಿ.ಗಳ ಮೂಲಕ ಜಮೆ ಮಾಡಿದ್ದಾರೆ. ಆ ಮೂಲಕ ಶಶಿಕಲಾ ಅವರ ಬಿಡುಗಡೆಗೆ ಇದ್ದ ಅಡ್ಡಿಯೊಂದು ನಿವಾರಣೆಯಾದಂತಾಗಿದೆ. 2017ರ ಫೆ.15ರಿಂದ ಪರಪ್ಪನ ಅಗ್ರಹಾರದಲ್ಲಿ ಅವರು ಶಿಕ್ಷೆ ಅನುಭವಿಸುತ್ತಿದ್ದಾರೆ.
‘ನ್ಯಾಯಾ ಲಯ ವಿಧಿಸಿರುವ ದಂಡವನ್ನು ಪಾವತಿಸಿದರೆ, 2021ರ ಜನವರಿ 27ರಂದು ಶಶಿಕಲಾ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ’ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಯೊಂದಕ್ಕೆ ಉತ್ತರಿಸುತ್ತಾ ಜೈಲು ಆಡಳಿತವು ಅಕ್ಟೋಬರ್ನಲ್ಲಿ ತಿಳಿಸಿತ್ತು.
‘ದಂಡವನ್ನು ನ್ಯಾಯಾಲಯವು ಸ್ವೀಕರಿಸಿದೆ. ಆ ಬಗ್ಗೆ ಜೈಲು ಆಡಳಿತಕ್ಕೆ ಅಧಿಕೃತ ಮಾಹಿತಿಯನ್ನೂ ನೀಡಲಾಗಿದೆ. ಆದ್ದರಿಂದ 2021ರಲ್ಲಿ ಶಶಿಕಲಾ ಬಿಡುಗಡೆಯಾಗುವುದು ಖಚಿತ’ ಎಂದು ಅವರ ವಕೀಲ ಎನ್. ರಾಜಸೆಂತೂರ್ ಪಾಂಡ್ಯನ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.