ADVERTISEMENT

‘ಆಪರೇಷನ್‌ ಮಹಾದೇವ‘: ಪಹಲ್ಗಾಮ್‌ ದಾಳಿಯ ರೂವಾರಿ ಹತ್ಯೆ

ಪಿಟಿಐ
Published 28 ಜುಲೈ 2025, 15:52 IST
Last Updated 28 ಜುಲೈ 2025, 15:52 IST
ದಾಚಿಗಾಮ್‌ನಲ್ಲಿ ಶೋಧ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಭದ್ರತಾ ಸಿಬ್ಬಂದಿ
ದಾಚಿಗಾಮ್‌ನಲ್ಲಿ ಶೋಧ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಭದ್ರತಾ ಸಿಬ್ಬಂದಿ   

ಶ್ರೀನಗರ: ನಗರದ ಹೊರವಲಯದ ದಾಚೀಗಾಮ್‌ನಲ್ಲಿ ‘ಆಪರೇಷನ್‌ ಮಹಾದೇವ‘ ಹೆಸರಿನಲ್ಲಿ ಭದ್ರತಾ ಪಡೆ ಸಿಬ್ಬಂದಿ ಸೋಮವಾರ ಕಾರ್ಯಾಚರಣೆ ನಡೆಸಿ, ಪಹಲ್ಗಾಮ್‌ ದಾಳಿಯ ರೂವಾರಿ ಸೇರಿದಂತೆ ಪಾಕಿಸ್ತಾನದ ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. 

ಮೃತ ಉಗ್ರರನ್ನು ಹಸೀಮ್‌ ಮುಸಾ ಅಲಿಯಾಸ್‌ ಸುಲೇಮಾನ್‌, ಪಾಕಿಸ್ತಾನದ ಯಾಸಿರ್‌ ಹಾಗೂ ಅಬು ಹಮ್ಜಾ ಎಂದು ಗುರುತಿಸಲಾಗಿದೆ. ಉಗ್ರ ಹಸೀಮ್‌ ಅಲಿಯಾಸ್ ಸುಲೇಮಾನ್‌ ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯ ರೂವಾರಿಯಾಗಿದ್ದ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಪಹಲ್ಗಾಮ್‌ನಲ್ಲಿ ಉಗ್ರರು ಬಳಸಿದ್ದ ಸಾಧನವನ್ನೇ ಹೋಲುವ ತಾಂತ್ರಿಕ ಸಿಗ್ನಲ್‌ ಪತ್ತೆಯಾದ ಹಿನ್ನೆಲೆಯಲ್ಲಿ ಮುನ್ನಾರ್‌ ಗ್ರಾಮ ಹಾಗೂ ಹರ್ವನ್‌ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಯ ವಿಶೇಷ ಘಟಕದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ಉಗ್ರರ ಹತ್ಯೆ ಮಾಡಲಾಗಿದೆ. 

ADVERTISEMENT

ಘಟನಾ ಸ್ಥಳದಿಂದ ಒಂದು ಎಂ–4 ಕಾರ್ಬೈನ್‌ ರೈಫಲ್, 2 ಎಕೆ–ರೈಫಲ್‌ಗಳು ಹಾಗೂ ಮದ್ದು–ಗುಂಡು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದ್ದು, ಅದು ಪೂರ್ಣಗೊಂಡ ಬಳಿಕ ಇತರೆ ಮಾಹಿತಿಯನ್ನು ಬಹಿರಂಗಪಡಿಸಲಾಗುವುದು ಎಂದು ಕಾಶ್ಮೀರ ವಲಯದ ಐಜಿಪಿ ವಿ.ಕೆ. ಬಿದ್ರಿ ಹೇಳಿದ್ದಾರೆ. 

ಫೋನ್‌ ಸಿಗ್ನಲ್‌ನಿಂದ ಉಗ್ರರ ಬೇಟೆ 

ಸ್ಯಾಟಲೈಟ್ ಫೋನ್‌ನ ಸಿಗ್ನಲ್‌ನ ಸಹಾಯದಿಂದಾಗಿ ಭದ್ರತಾ ಪಡೆಗಳು ಪಹಲ್ಗಾಮ್‌ ದಾಳಿ ನಡೆಸಿದ್ದ ಉಗ್ರರ ಜಾಲವನ್ನು ಭೇದಿಸಲು ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. ಪಹಲ್ಗಾಮ್‌ನಲ್ಲಿ ಲಷ್ಕರ್‌–ಎ–ತಯಬಾ ಉಗ್ರರು ಬಳಸಿದ್ದ ಹುವಾಯಿ ಸ್ಯಾಟಲೈಟ್‌ ಫೋನ್‌ ದಾಳಿಯ ಬಳಿಕ ಸ್ತಬ್ಧಗೊಂಡಿತ್ತು. ದಾಳಿ ನಡೆದ ಮೂರು ತಿಂಗಳ ಬಳಿಕ ಎರಡು ದಿನಗಳ ಹಿಂದಷ್ಟೇ ಫೋನ್‌ ಸಕ್ರಿಯವಾಗಿದೆ. ಭದ್ರತಾ ಪಡೆಗಳು ಫೋನ್‌ ಸಿಗ್ನಲ್ ಸುಳಿವು ಹಿಡಿದು ಹೊರಟಾಗ ದಾಚೀಗಾಮ್‌ನ ಅರಣ್ಯ ಪ್ರದೇಶದಲ್ಲಿನ ಉಗ್ರರ ಜಾಲ ಪತ್ತೆಯಾಯಿತು ಎಂದು ಮೂಲಗಳು ತಿಳಿಸಿವೆ. 

ಉಗ್ರರ ಸಹಚರನ ಬಂಧನ
ಉಗ್ರರಿಗೆ ನೆರವು ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಭದ್ರತಾ ಸಿಬ್ಬಂದಿ ಕುಪ್ವಾಡ ಜಿಲ್ಲೆಯಲ್ಲಿ ಸೋಮವಾರ ಬಂಧಿಸಿದ್ದಾರೆ. ಬಂಧಿತನನ್ನು ಮಾರ್ಸರಿ ಗ್ರಾಮದ ನಿವಾಸಿ ವಾಲಿ ಮೊಹಮ್ಮದ್‌ ಮೀರ್‌ ಎಂದು ಗುರುತಿಸಲಾಗಿದೆ. ಆತನಿಂದ ಶಸ್ತ್ರಾಸ್ತ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುಪ್ತಚರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಮೀರ್‌ನನ್ನು ಬಂಧಿಸಲಾಗಿದೆ. ಆತ ವಿವಿಧ ಉಗ್ರ ಸಂಘಟನೆಗಳ ಸಂಪರ್ಕದಲ್ಲಿದ್ದು ಉಗ್ರರಿಗೆ ಶಸ್ತ್ರಾಸ್ತ ಮತ್ತು ಮದ್ದುಗುಂಡುಗಳನ್ನು ಪೂರೈಕೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.