ನವದೆಹಲಿ: ಕೃಷಿ ಕಾಯ್ದೆಗಳ ವಿಚಾರವಾಗಿ ಸುಪ್ರೀಂ ಕೋರ್ಟ್ ರಚಿಸಿರುವ ಸಮಿತಿ ಸದಸ್ಯರಾಗಿರುವ ಅನಿಲ್ ಘನ್ವಾತ್ ಎಂಬವರು, ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು ಕೃಷಿ ಕಾಯ್ದೆಗಳ ಕುರಿತಾದ ವರದಿಯನ್ನು ಶೀಘ್ರ ಬಿಡುಗಡೆ ಮಾಡಬೇಕು ಅಥವಾ ಬಿಡುಗಡೆ ಅಧಿಕಾರವನ್ನು ನಮಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಶೆಟ್ಕಾರಿ ರೈತ ಸಂಘಟನೆಯ ಸದಸ್ಯರೂ ಆಗಿರುವ ಘನ್ವಾತ್ ಅವರು, ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದು, ಕೃಷಿಯಲ್ಲಿ ಅತ್ಯಗತ್ಯವಾಗಿ ಬೇಕಾಗಿರುವ ಸುಧಾರಣೆಗೆ ಒತ್ತಾಯಿಸಿ ಮುಂದಿನ ಕೆಲ ತಿಂಗಳುಗಳಲ್ಲಿ ದೆಹಲಿಗೆ 1 ಲಕ್ಷ ರೈತರನ್ನು ಕರೆತರುವುದಾಗಿ ಹೇಳಿದ್ದಾರೆ.
ಪ್ರತಿಭಟನಾನಿರತ ರೈತರು ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡಲೂ ಸಹ ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದಿದ್ದಾರೆ.
ಇಂದು ಮುಖ್ಯ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್.ವಿ. ರಮಣ ಅವರಿಗೆ ಪತ್ರ ಬರೆದಿರುವ ಘನ್ವಾತ್ ಅವರು, ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಸರ್ಕಾರ ಹೇಳಿದೆ. ಹಾಗಾಗಿ, ನಮ್ಮ ವರದಿಗೆ ಯಾವುದೇ ಮಹತ್ವವಿಲ್ಲ. ಆದರೆ, ಸಾರ್ವಜನಿಕರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ನಾವು ಮಾಡಿರುವ ಶಿಫಾರಸುಗಳಿಗೆ ಮಹತ್ವವಿದೆ ಎಂದು ಅವರು ತಿಳಿಸಿದ್ದಾರೆ.
ಮೂರೂ ಕೃಷಿ ಕಾಯ್ದೆಗಳ ಕುರಿತಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ಮೂರು ಸದಸ್ಯರ ಸಮಿತಿಯು ಮಾರ್ಚ್ 19ರಂದೇ ವರದಿ ಸಲ್ಲಿಸಿತ್ತು. ಸೆಪ್ಟೆಂಬರ್ 1ರಂದು ಘನ್ವಾತ್ ಪತ್ರದ ಮೂಲಕ ಒತ್ತಾಯಿಸಿದ ಬಳಿಕವೂ ಸುಪ್ರೀಂ ಕೋರ್ಟ್ ವರದಿಯನ್ನು ಬಹಿರಂಗಗೊಳಿಸಿರಲಿಲ್ಲ. ಈಗ ಮತ್ತೆ ಮನವಿ ಮಾಡಿರುವ ಘನ್ವಾತ್, ನಮ್ಮ ವರದಿಯಲ್ಲಿರುವ ಶಿಫಾರಸುಗಳು ರೈತರ ಪ್ರತಿಭಟನೆಗೆ ಪರಿಹಾರ ಕಂಡುಹಿಡಿಯಲು ಮಾರ್ಗ ತೋರುತ್ತವೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.