ADVERTISEMENT

ಕ್ರೈಸ್ತ ಸಮುದಾಯದವರ ಮೇಲೆ ದಾಳಿ: ರಾಜ್ಯಗಳ ವರದಿ ಕೇಳಿದ ಸುಪ್ರೀಂ ಕೋರ್ಟ್

ಪಿಟಿಐ
Published 1 ಸೆಪ್ಟೆಂಬರ್ 2022, 12:28 IST
Last Updated 1 ಸೆಪ್ಟೆಂಬರ್ 2022, 12:28 IST
   

ನವದೆಹಲಿ: ದೇಶದ ಕೆಲವು ರಾಜ್ಯಗಳಲ್ಲಿ ಕ್ರೈಸ್ತ ಸಮುದಾಯದ ಸದಸ್ಯರ ಮೇಲೆ ದಾಳಿ ಆರೋಪಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ರಾಜ್ಯಗಳಿಂದ ವರದಿ ಪಡೆಯುವಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಸೂಚಿಸಿದೆ.

ಇದರಲ್ಲಿ ಕರ್ನಾಟಕ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಹರಿಯಾಣ, ಒಡಿಶಾ, ಛತ್ತೀಸ್‌ಗಡ ಮತ್ತು ಜಾರ್ಖಂಡ್ ರಾಜ್ಯಗಳೂ ಸೇರಿವೆ.

ಒಬ್ಬ ವ್ಯಕ್ತಿ ಮೇಲೆ ನಡೆದ ದಾಳಿಯನ್ನು ಒಂದು ಸಮುದಾಯದ ಮೇಲಿನ ದಾಳಿ ಎಂದು ಅರ್ಥೈಸಲು ಸಾಧ್ಯವಿಲ್ಲ. ಆ ಕುರಿತು ಪಿಐಎಲ್‌ನಲ್ಲಿ ಮಾಡಲಾಗಿರುವ ಆರೋಪದ ಬಗ್ಗೆ ಪರಿಶೀಲಿಸುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ಹಿಮ ಕೊಹ್ಲಿ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ.

ADVERTISEMENT

ಇಂತಹ ಘಟನೆಗಳ ನಡೆದಾಗ ವರದಿ ಕೊಡುವುದು ಮತ್ತು ಮೇಲ್ವಿಚಾರಣೆಗಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸುವ ಬಗ್ಗೆ ರಾಜ್ಯಗಳುತನ್ನ ಹಿಂದಿನ ತೀರ್ಪುಗಳನ್ನು ಪಾಲಿಸುತ್ತಿಲ್ಲವೇಎನ್ನುವುದು ಮಾತ್ರ ನ್ಯಾಯಾಲಯದ ಕಳವಳವಾಗಿದೆ ಎಂದು ಪೀಠ ಹೇಳಿದೆ.

ಈ ಕುರಿತಂತೆ, ರಾಜ್ಯಗಳಿಂದ ವರದಿ ತರಿಸಿಕೊಂಡು ಸಲ್ಲಿಸಲುಸುಪ್ರೀಂ ಕೋರ್ಟ್, ಗೃಹ ಸಚಿವಾಲಯಕ್ಕೆ ಎರಡು ತಿಂಗಳ ಕಾಲಾವಕಾಶ ನೀಡಿದೆ.

ಪಿಐಎಲ್‌ನಲ್ಲಿ ಉಲ್ಲೇಖಿಸಿರುವ ಬಹುತೇಕ ಪ್ರಕರಣಗಳು ಸುಳ್ಳಿನಿಂದ ಕೂಡಿವೆ ಮತ್ತು ವೆಬ್ ಪೋರ್ಟಲ್‌ನಲ್ಲಿ ಪ್ರಕಟವಾಗಿರುವ ಲೇಖನಗಳು ಸ್ವಹಿತಾಸಕ್ತಿಯುಳ್ಳವಾಗಿವೆ. ಇಂತಹಪಿಐಎಲ್‌ನಲ್ಲಿ ನ್ಯಾಯಾಲಯವು ಆದೇಶ ಹೊರಡಿಸಿದರೆ, ಹಲವು ತೊಂದರೆಗಳು ಮತ್ತು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ಯಾವುದೇ ಆದೇಶ ಹೊರಡಿಸಬಾರದು ಎಂದು ಪೀಠಕ್ಕೆಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರುಮನವಿ ಮಾಡಿದರು.

ದೇಶದಲ್ಲಿ ಕ್ರಿಶ್ಚಿಯನ್ ಸಮುದಾಯದ ಸದಸ್ಯರ ವಿರುದ್ಧ ಹಿಂಸಾಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ ರಾಷ್ಟ್ರೀಯ ಸಾಲಿಡಾರಿಟಿ ಫೋರಂನ ರೆ.ಡಾ.ಪೀಟರ್ ಮಚಾಡೊ, ಇವಾಂಜೆಲಿಕಲ್ ಫೆಲೋಶಿಪ್ ಆಫ್ ಇಂಡಿಯಾದ ರೆ.ವಿ.ವಿಜಯೇಶ್ ಲಾಲ್ ಮತ್ತು ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲೆ ನ್ಯಾಯಾಲಯದ ಆದೇಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.