ADVERTISEMENT

ಬಂಡೀಪುರ ಕಾಳ್ಗಿಚ್ಚು: ‘ಸುಪ್ರೀಂ’ಗೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 19:00 IST
Last Updated 4 ಮಾರ್ಚ್ 2019, 19:00 IST
   

ನವದೆಹಲಿ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಾವಿರಾರು ಎಕರೆ ಅರಣ್ಯ ಭೂಮಿಯಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡ ಘಟನೆಯ ಕುರಿತು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಲಾಗಿದೆ.

ಬಂಡೀಪುರ ಅರಣ್ಯ ಪ್ರದೇಶದ ಮೂಲಕ ಹಾದು ಹೋಗುವ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ರಾತ್ರಿ ವೇಳೆ ಹೇರಿರುವ ನಿರ್ಬಂಧ ತೆರವು ಕೋರಿರುವ ಕೇರಳದ ಮೇಲ್ಮನವಿಯ ವಿಚಾರಣೆ ಇದೇ 6ರಂದು ನಡೆಯಲಿದೆ.

ದುಷ್ಕರ್ಮಿಗಳಿಂದಲೇ ಕಾಳ್ಗಿಚ್ಚು ಹಬ್ಬಿರುವ ಸಂಗತಿಯನ್ನು ನ್ಯಾಯಪೀಠ ಗಂಭೀರವಾಗಿ ಪರಿಗಣಿಸಲಿ ಎಂಬ ಉದ್ದೇಶದಿಂದ ಮೈಸೂರಿನ ನಿವಾಸಿ ಸಿರಿಯಾಕ್‌ ಫಿಲಿಪ್‌ ಅವರು ವಕೀಲ ಜಿ.ಆರ್‌.ಮೋಹನ್‌ ಮೂಲಕ ಹೇಳಿಕೆ ಸಲ್ಲಿಸಿದ್ದಾರೆ.

ADVERTISEMENT

‘ಬಂಡೀಪುರ ಅರಣ್ಯ ಪ್ರದೇಶದ ಕುಂದಕೆರೆ ವಲಯದಲ್ಲಿ ಫೆಬ್ರುವರಿ 23ರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದ್ದು, ಮದ್ದೂರು ಮತ್ತು ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯಗಳಿಗೂ ಚಾಚಿಕೊಂಡಿದೆ. ಒಟ್ಟು 874 ಚದರ ಕಿಲೋ ಮೀಟರ್‌ ವ್ಯಾಪ್ತಿಯ ಅರಣ್ಯದಲ್ಲಿ 8,000 ಎಕರೆಗೂ ಅಧಿಕ ಅರಣ್ಯ ಬೆಂಕಿಯ ಕೆನ್ನಾಲಗೆಗೆ ಆಹುತಿಯಾಗಿದೆ. ದುಷ್ಕರ್ಮಿಗಳೇ ಬೆಂಕಿ ಹಚ್ಚಿರುವುದು ಅರಣ್ಯ ಇಲಾಖೆ ಅಧಿಕಾರಿಗಳಿಂದ ದೃಢಪಟ್ಟಿದೆ’ ಎಂದು ಮಾಹಿತಿ ನೀಡಲಾಗಿದೆ.

ಈ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಹೇರಲಾಗಿರುವ ನಿಷೇಧ ತೆರವು ಕುರಿತು ಒಮ್ಮತದ ನಿರ್ಧಾರ ಕೈಗೊಳ್ಳುವಂತೆ ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಹಾಗೂ ಹೆದ್ದಾರಿ ಸಚಿವಾಲಯಗಳನ್ನು ಕೋರಲಾಗಿದೆ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರು ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಆರ್‌.ಎಫ್‌. ನಾರಿಮನ್‌ ನೇತೃತ್ವದ ಪೀಠಕ್ಕೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.