
ನವದೆಹಲಿ: ಆಂಧ್ರಪ್ರದೇಶದ ಮಾಚೆರ್ಲ ವಿಧಾನಸಭಾ ಕ್ಷೇತ್ರದಲ್ಲಿ ಇವಿಎಂಗೆ ಹಾನಿಪಡಿಸಿದ್ದ ವೈಎಸ್ಆರ್ಸಿಪಿ ಶಾಸಕ ಪಿನ್ನೆಲ್ಲಿ ರಾಮಕೃಷ್ಣ ರೆಡ್ಡಿ ಅವರು ಜೂನ್ 4ರಂದು ಮತ ಎಣಿಕೆ ಕೇಂದ್ರ ಪ್ರವೇಶಿಸುವುದನ್ನು ನಿರ್ಬಂಧಿಸಿ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಮತ್ತು ಸಂದೀಪ್ ಮೆಹ್ತಾ ಅವರ ರಜಾಕಾಲದ ಪೀಠವು ಮೇ 13ರಂದು ನಡೆದಿದ್ದ ಘಟನೆಯ ವಿಡಿಯೊ ವೀಕ್ಷಿಸಿತು. ನಂತರ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿರುವ ಬಗ್ಗೆ ಪ್ರಶ್ನಿಸಿದ ನ್ಯಾಯಾಲಯವು, ‘ಅದು ನ್ಯಾಯ ವ್ಯವಸ್ಥೆಯ ಅಣಕ’ ಎಂದು ಅಭಿಪ್ರಾಯಪಟ್ಟಿತು.
ಮಾಚೆರ್ಲ ವಿಧಾನಸಭಾ ಕ್ಷೇತ್ರದ ವೈಎಸ್ಆರ್ಸಿಪಿ ಅಭ್ಯರ್ಥಿಯಾಗಿರುವ ರಾಮಕೃಷ್ಣ ರೆಡ್ಡಿ ಮೇ 13ರಂದು ತಮ್ಮ ಬೆಂಬಲಿಗರೊಂದಿಗೆ ಮತಗಟ್ಟೆಗೆ ನುಗ್ಗಿದ್ದಲ್ಲದೇ ವಿವಿಪ್ಯಾಟ್ ಮತ್ತು ಇವಿಎಂ ಯಂತ್ರಗಳನ್ನು ಒಡೆದುಹಾಕಿದ್ದರು.
ತೆಲುಗು ದೇಶಂ ಪಕ್ಷದ (ಟಿಡಿಪಿ) ಮತಗಟ್ಟೆ ಏಜೆಂಟ್ ಶೇಷಾದ್ರಿ ರಾವ್ ನಂಬೂರಿ ಅವರು ರಾಮಕೃಷ್ಣ ರೆಡ್ಡಿ ಅವರನ್ನು ಬಂಧಿಸದಂತೆ ನೀಡಿಲಾಗಿದ್ದ ಮಧ್ಯಂತರ ಜಾಮೀನು ರದ್ದುಪಡಿಸುವಂತೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಘಟನೆಯ ವಿಡಿಯೊ ಇದ್ದರೂ ಪೊಲೀಸರು ಶಾಸಕನ ವಿರುದ್ಧ ಪ್ರಕರಣದ ದಾಖಲಿಸದೇ ಇತರ ಕೆಲವರ ವಿರುದ್ಧ ದಾಖಲಿಸಿದ್ದಾರೆ ಎಂದು ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.