ADVERTISEMENT

ಜೀವನಾಂಶ ಕೋರಿ ಅರ್ಜಿ: ವಿಸ್ತೃತ ಪೀಠಕ್ಕೆ ವರ್ಗಾವಣೆ

ರಾಜಸ್ಥಾನ ಮೂಲದ ವಿಚ್ಛೇದಿತ ಮುಸ್ಲಿಂ ಮಹಿಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 16:38 IST
Last Updated 19 ಜೂನ್ 2020, 16:38 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ವಿಚ್ಛೇದಿತ ಮುಸ್ಲಿಂ ಮಹಿಳೆಯು ಜೀವನಾಂಶ ಕೋರಿ ಸಲ್ಲಿಸಿರುವ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯವು ವಿಚಾರಣೆ ನಡೆಸಿ ತೀರ್ಪು ನೀಡಬಹುದೇ ಎನ್ನುವ ವಿಚಾರವನ್ನುವಿಸ್ತೃತ ಪೀಠಕ್ಕೆ ಸುಪ್ರೀಂ ಕೋರ್ಟ್‌ ವರ್ಗಾಯಿಸಿದೆ.

ರಾಜಸ್ಥಾನ ಮೂಲದ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನುನ್ಯಾಯಮೂರ್ತಿಗಳಾದ ಆರ್.ಭಾನುಮತಿ ಹಾಗೂ ಇಂದಿರಾ ಬ್ಯಾನರ್ಜಿ ಅವರಿದ್ದ ಪೀಠವು ವಿಚಾರಣೆ ನಡೆಸಿತು. ಈ ವಿಷಯದಲ್ಲಿ ನ್ಯಾಯಮೂರ್ತಿಗಳು ಭಿನ್ನಾಭಿಪ್ರಾಯಹೊಂದಿದ್ದ ಕಾರಣ, ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವಂತೆ ಆದೇಶಿಸಲಾಗಿದೆ.

‘1986ರ ಮುಸ್ಲಿಂ ಮಹಿಳೆ ರಕ್ಷಣೆ ಕಾಯ್ದೆಯಲ್ಲಿ ಕೌಟುಂಬಿಕ ನ್ಯಾಯಾಲಯದ ಪ್ರಸ್ತಾಪವಿಲ್ಲಅಥವಾ ಸೆಕ್ಷನ್‌ 3 ಅಥವಾ 4ರಡಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು ಎನ್ನುವ ಉಲ್ಲೇಖವಿಲ್ಲ. ಹೀಗಾಗಿ ವಿಚ್ಛೇದಿತ ಮುಸ್ಲಿಂ ಮಹಿಳೆಯ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯವು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎನ್ನುವುದು ನನ್ನ ಅಭಿಪ್ರಾಯ’ ಎಂದು ನ್ಯಾಯಮೂರ್ತಿ ಭಾನುಮತಿ ಹೇಳಿದರು.

ADVERTISEMENT

‘ವಿಚ್ಛೇದಿತ ಪತ್ನಿಯು, ‘ಇದ್ದತ್’ (40 ದಿನ) ಅವಧಿ ಬಳಿಕಜೀವನಾಂಶ ಕೋರಿ ಅರ್ಜಿ ಸಲ್ಲಿಸುವುದಾದರೆ, ಕ್ರಮಬದ್ಧವಾಗಿ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್‌ ಮುಂದೆ ಸಲ್ಲಿಸಬೇಕು. ಆ ಪ್ರದೇಶದಲ್ಲಿ ಕೌಟುಂಬಿಕ ನ್ಯಾಯಾಲಯವಿದ್ದರೂ, ಇಂಥ ಅರ್ಜಿ ವಿಚಾರಣೆ ನಡೆಸುವ ವ್ಯಾಪ್ತಿ ಅದಕ್ಕೆ ಇಲ್ಲ’ ಎಂದು ಭಾನುಮತಿ ತಿಳಿಸಿದರು.

‘ಕೌಟುಂಬಿಕ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯಲ್ಲಿ, ಸಿಆರ್‌ಪಿಸಿ ಸೆಕ್ಷನ್‌ 125ರಡಿ ಮುಸ್ಲಿಂ ಮಹಿಳೆ ಸಲ್ಲಿಸಿರುವ ಅರ್ಜಿಯನ್ನು 1986ರ ಕಾಯ್ದೆಯ ಸೆಕ್ಷನ್‌ 3ರಡಿಯ ಅರ್ಜಿಯಾಗಿ ಪರಿವರ್ತಿಸಬಹುದು. ಸಿಆರ್‌ಪಿಸಿ ಸೆಕ್ಷನ್‌ 125ರ ವ್ಯಾಪ್ತಿಯಿಂದ ವಿಚ್ಛೇದಿತ ಮುಸ್ಲಿಂ ಮಹಿಳೆಯನ್ನು ಹೊರಗಿಟ್ಟಿದ್ದರೂ, ಜೀವನಾಂಶ ಕೋರಿ ಸಲ್ಲಿಕೆಯಾಗಿರುವ ಅರ್ಜಿಗೆ ಶೀಘ್ರ ತೀರ್ಪು ನೀಡುವ ಅಗತ್ಯತೆ ಇದೆ ಎಂದು ಸಂಸತ್‌ ಪರಿಗಣಿಸಿದೆ’ ಎಂದು ತಮ್ಮ ತೀರ್ಪಿನಲ್ಲಿ ಇಂದಿರಾ ಬ್ಯಾನರ್ಜಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.